ಜಮ್ಮು ಕಾಶ್ಮೀರದಲ್ಲಿ ಇನ್ನೆಷ್ಟು ದಿನ ಬಿಗಿ ಭದ್ರತೆ , ಕೇಂದ್ರ ಹೇಳಿದ್ದೇನು?
ಶ್ರೀನಗರ, ಆಗಸ್ಟ್ 22: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಶೀಘ್ರ ಹಿಂಪಡೆಯುವ ಯಾವ ಆಲೋಚನೆಯೂ ಇಲ್ಲ ಎಂದು ಕೇಂದ್ರ ತಿಳಿಸಿದೆ.
ಪರಿಚ್ಛೇದ 370 ರದ್ದುಗೊಳಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು 25ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.
ಭಾರತ ಒಪ್ಪಿದರೆ ಮಧ್ಯಸ್ಥಿಕೆಯಿಂದ ಕಾಶ್ಮೀರ ಸಮಸ್ಯೆ ನಿವಾರಣೆ ಸಾಧ್ಯ ಎಂದ ಪಾಕ್
ಆಗಸ್ಟ್ 4ರಿಂದಲೇ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಭದ್ರತಾ ಸಿಬ್ಬಂದಿಗಳು ಕೂಡ ತಮ್ಮ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಕರ್ಫ್ಯೂ ಜಾರಿ ಮಾಡಲಾಗಿತ್ತು.
ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಾಗಿದೆ. ವಿಧಾನಸಭೆಯೂ ಇದೆ. ಅಲ್ಲಿ ಪರಿಸ್ಥಿತಿ ಶಾಂತ ರೂಪಕ್ಕೆ ಬರುತ್ತಿದ್ದರೂ ಕೂಡ ಶೀಘ್ರ ಭದ್ರತಾ ಸಿಬ್ಬಂದಿಗಳನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದೆ.
ಪಾಕಿಸ್ತಾನವು ಕಾಶ್ಮೀರದ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಒಂದೊಮ್ಮೆ ಭದ್ರತಾ ಸಿಬ್ಬಂದಿಯನ್ನು ಕಡಿಮೆ ಮಾಡಿದರೆ ಶಾಂತಿ ಕದಡಿ ಕಲಹಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಇದೆ, ಗೃಹ ಸಚಿವ ಅಮಿತ್ ಶಾ ನಿತ್ಯವೂ ಅಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸುತ್ತಿದ್ದಾರೆ. ಶಾಲಾ ಕಾಲೇಜುಗಳು ತೆರೆದಿವೆ. ಸೆಕ್ಷನ್ 144 ಹಿಂಪಡೆಯಲಾಗಿದೆ. ಸರ್ಕಾರಿ ಕಚೇರಿಗಳು ಕೂಡ ತೆರೆದಿವೆ ಎನ್ನುವ ಮಾಹಿತಿ ನೀಡಿದ್ದಾರೆ.
ವಿಧಿ 370 ರದ್ದಾಗಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಸಿಗಲಿದೆ ಹಾಗೆ ಸಾಕಷ್ಟು ಸೌಲಭ್ಯಗಳು ಲಭ್ಯವಾಗಲಿದೆ.