ಮಸೀದಿಗಳ ಧ್ವನಿವರ್ಧಕ, ಹಲಾಲ್ ಕಟ್ ನಿಷೇಧ; ಹಿಂಗಾದ್ರೆ ಹೆಂಗೆ ಎಂದ ಒಮರ್ ಅಬ್ದುಲ್ಲಾ
ಶ್ರೀನಗರ್, ಏಪ್ರಿಲ್ 28: ಇಂದಿನ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಒಪ್ಪಿಕೊಂಡ ದೇಶವಲ್ಲ. ಈ ದೇಶದಲ್ಲಿ ಮುಸ್ಲಿಮರ ಧಾರ್ಮಿಕ ಹಕ್ಕುಗಳು ರಕ್ಷಿಸಲ್ಪಡುವುದಿಲ್ಲ ಎಂದು ಜನರಿಗೆ ತಿಳಿದಿದ್ದರೆ ನಿರ್ಧಾರ "ಬೇರೆಯೇ ಆಗುತ್ತಿತ್ತು" ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಶ್ರೀನಗರದಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಆಜಾನ್ ಅಥವಾ ಪ್ರಾರ್ಥನೆಯ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಡೆಯುತ್ತಿರುವ ವಿವಾದ, ತರಗತಿಯಲ್ಲಿ ಹಿಜಾಬ್ ಮತ್ತು ಹಲಾಲ್ ಕಟ್ ಬಗ್ಗೆ ಉಲ್ಲೇಖಿಸಿದರು. ಮುಸ್ಲಿಮರ ಧಾರ್ಮಿಕ ನಂಬಿಕೆಗಳು ಮತ್ತು ಅವರ ಜೀವನ ವಿಧಾನವನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ದೂಷಿಸಿದರು.
ಆಜಾನ್ ಸದ್ದಿಗೆ ವಿರೋಧ; ಶಬ್ದ ಮಿತಿ ಎಷ್ಟಿರಬೇಕು? ಇಲ್ಲಿದೆ ವಿವರ
"ನಾವು ಭಾರತಕ್ಕೆ ಸೇರಲು ನಿರ್ಧರಿಸಿದಾಗ, ಪ್ರತಿ ಧರ್ಮವನ್ನು ಸಮಾನವಾಗಿ ಪರಿಗಣಿಸುವ ದೇಶಕ್ಕೆ ಸೇರಿಕೊಂಡೆವು. ಒಂದು ಧರ್ಮಕ್ಕೆ ಆದ್ಯತೆ ನೀಡಲಾಗುತ್ತದೆ ಮತ್ತು ಇತರರನ್ನು ಹತ್ತಿಕ್ಕಲಾಗುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ. ಅದು ತಿಳಿದಿದ್ದರೆ ಬಹುಶಃ ನಮ್ಮ ನಿರ್ಧಾರ ಬೇರೆಯೇ ಆಗುತ್ತಿತ್ತು. ಎಲ್ಲ ಧರ್ಮಕ್ಕೂ ಸಮಾನ ಹಕ್ಕು ಸಿಗುತ್ತದೆ ಎಂದು ಹೇಳಿದ ಮೇಲೆಯೇ ಪ್ರಜ್ಞಾಪೂರ್ವಕವಾಗಿ ನಾವು ಈ ನಿರ್ಧಾರ ತೆಗೆದುಕೊಂಡೆವು," ಎಂದರು.
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಏಕೆ ಬಳಸಬಾರದು?
ನಾವು ಮಸೀದಿಗಳಲ್ಲಿ ಏಕೆ ಧ್ವನಿವರ್ಧಕಗಳನ್ನು ಬಳಸಬಾರದು, ಬೇರೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು ಬಳಕೆ ಆಗುತ್ತಿರುವಾಗ ಮಸೀದಿಗಳಲ್ಲಿ ಮಾತ್ರ ಏಕೆ ಅದನ್ನು ನಿಷೇಧಿಸಬೇಕು ಎಂದು ಒಮರ್ ಅಬ್ದುಲ್ಲಾ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ಕಟ್ ವಿವಾದ
ಕಳೆದ ಕೆಲವು ವಾರಗಳಲ್ಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ನಂತಹ ರಾಜ್ಯಗಳು ರಾಮನವಮಿ ಮೆರವಣಿಗೆಯಲ್ಲಿ ಘರ್ಷಣೆಗಳು ನಡೆದಿವೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶಗಳಲ್ಲಿ ಮತ್ತು ಬೀದಿಗಳಲ್ಲಿ ಜೋರಾಗಿ ಶಬ್ಧ ಮಾಡುತ್ತಾ ಹಾಡು ಹಾಕಿಕೊಂಡು ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಘರ್ಷಣೆಗಳು ನಡೆದಿದ್ದವು. ಕರ್ನಾಟಕದಲ್ಲಿ ವಿದ್ಯಾರ್ಥಿನಿಯರು ಶಾಲಾ ಕೊಠಡಿಯಲ್ಲಿ ಹಿಜಾಬ್ ಧರಿಸಬಾರದು ಎನ್ನುವುದಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಸೃಷ್ಟಿಯಾಗಿತ್ತು. ಈ ವಿವಾದ ಮಾಸುವ ಮೊದಲೇ ಬಲಪಂಥೀಯ ಗುಂಪುಗಳು ಹಲಾಲ್ ಮಾಂಸದ ಮಾರಾಟವನ್ನು ವಿರೋಧಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
"ಹಲಾಲ್ ಕಟ್ ಮಾಂಸ ಸೇವನೆ ನಿಷೇಧಕ್ಕೆ ಕಾರಣವೇನು?"
"ಹಲಾಲ್ ಮಾಂಸವನ್ನು ಮಾರಾಟ ಮಾಡಬೇಡಿ ಎಂದು ನೀವು ನಮಗೆ ಏಕೆ ಹೇಳುತ್ತೀರಿ?, ನಮ್ಮ ಧರ್ಮದಲ್ಲಿ ಹಲಾಲ್ ಮಾಂಸವನ್ನು ತಿನ್ನುವಂತೆ ಹೇಳುತ್ತದೆ. ನೀವು ಅದನ್ನು ಏಕೆ ನಿಲ್ಲಿಸುತ್ತಿದ್ದೀರಿ? ನಾವು ನಿಮ್ಮನ್ನು ಹಲಾಲ್ ತಿನ್ನಲು ಒತ್ತಾಯಿಸುತ್ತಿಲ್ಲ. ಯಾವುದೇ ಮುಸಲ್ಮಾನರು ನಿಮ್ಮನ್ನು ಹಲಾಲ್ ತಿನ್ನಲು ಬಲವಂತಪಡಿಸಿದ್ದಾರೆಯೇ? ನೀವು ನಿಮ್ಮಿಷ್ಟರ ರೀತಿಯಲ್ಲಿ ಮಾಂಸಹಾರವನ್ನು ತಿನ್ನಿರಿ. ನಾವು ನಮಗಿಷ್ಟವಾದ ರೀತಿಯಲ್ಲಿ ತಿನ್ನುತ್ತೇವೆ," ಎಂದು ಒಮರ್ ಅಬ್ದುಲ್ಲಾ ಹೇಳಿದರು.
ನಿಮ್ಮ ಆಚರಣೆಗಳನ್ನು ನಾವು ಪ್ರಶ್ನೆ ಮಾಡುತ್ತೇವೆಯೇ ಎಂದ ಒಮರ್
ದೇಶದಲ್ಲಿ ದೇವಸ್ಥಾನಗಳು ಅಥವಾ ಇತರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಮುಸ್ಲಿಮರು ಎಂದಿಗೂ ವಿರೋಧಿಸಲಿಲ್ಲ ಎಂದು ಒಮರ್ ಅಬ್ದುಲ್ಲಾ ಹೇಳಿದರು. ದೇವಸ್ಥಾನದಲ್ಲಿ ಮೈಕ್ ಇರಬಾರದು ಎಂದು ನಾವು ನಿಮಗೆ ಯಾವತ್ತೂ ಹೇಳುವುದಿಲ್ಲ. ನೀವು ದೇವಸ್ಥಾನಗಳು ಮತ್ತು ಗುರುದ್ವಾರಗಳಲ್ಲಿ ಬೇಕಿದ್ದರೆ ಮೈಕ್ ಬಳಸುವುದನ್ನು ಬಿಡಿ. ಆದರೆ ನಾವು ಬಳಸುವ ಮೈಕ್ ವಿಚಾರಕ್ಕೆ ಬರಬೇಡಿ. ನಿಮಗೆ ನಮ್ಮ ಧ್ವನಿವರ್ಧಕ ಬಳಕೆಯು ಗಲಾಟೆ ಮಾಡುವಂತೆ ಗೋಚರಿಸುತ್ತದೆ. ನಮ್ಮ ಧಾರ್ಮಿಕ ಆಚರಣೆಗೆ ವಿರೋಧಿಸಿ ನೀವು ಗಲಾಟೆ ಮಾಡುತ್ತಿದ್ದೀರಿ. ನಾವು ಧರಿಸುವ ಬಟ್ಟೆಯ ಶೈಲಿ ನಿಮಗೆ ಇಷ್ಟವಾಗುವುದಿಲ್ಲ, ನಾವು ಪ್ರಾರ್ಥಿಸುವ ಶೈಲಿ ನಿಮಗೆ ಇಷ್ಟವಾಗುವುದಿಲ್ಲ. ನಿಮಗೆ ಬೇರೆಯವರ ಜೊತೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಆದರೆ ನಮ್ಮ ವಿಷಯದಲ್ಲಿ ಮಾತ್ರ ಧ್ವೇಷವನ್ನು ಹರಡುತ್ತಿದ್ದೀರಿ," ಎಂದು ಒಮರ್ ಅಬ್ಬುಲ್ಲಾ ದೂಷಿಸಿದ್ದಾರೆ.