ಪ.ಬಂಗಾಲ ಮೂಲದ ಆರು ಕಾರ್ಮಿಕರನ್ನು ಕುಲ್ಗಾಂನಲ್ಲಿ ಹತ್ಯೆ ಮಾಡಿದ ಉಗ್ರರು
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 29: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಭಯೋತ್ಪಾದಕರು ಆರು ಕಾರ್ಮಿಕರನ್ನು ಹತ್ಯೆ ಮಾಡಿದ್ದಾರೆ. ಜಮ್ಮು- ಕಾಶ್ಮೀರದ ರಾಜಧಾನಿ ಶ್ರೀನಗರ್ ನಿಂದ ಕುಲ್ಗಾಂ ಅರವತ್ತು ಕಿ.ಮೀ. ದೂರದಲ್ಲಿದೆ. ಕಳೆದ ಹದಿನೈದು ದಿನಗಳಿಂದ ಕಾಶ್ಮೀರದ ಹೊರಗಿನ ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗ್ಗುತ್ತಿದೆ.
ಕುಲ್ಗಾಂನ ಕಟ್ರಸೂ ಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ಉಗ್ರರು ಪಶ್ಚಿಮ ಬಂಗಾಲ ಮೂಲದ ಏಳು ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದು, ಆ ಪೈಕಿ ಝಹ್ರುದ್ದೀನ್ ಎಂಬ ವ್ಯಕ್ತಿಯ ಕಾಲಿಗೆ ಗುಂಡು ತಗುಲಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದ ಆರು ಮಂದಿ ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ; 9 ಮಂದಿಗೆ ಗಾಯ
ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಆ ನಂತರ ಸಂಖ್ಯೆ ಆರಕ್ಕೆ ಏರಿದೆ. ಪೊಲೀಸರು ಖಚಿತ ಪಡಿಸಿರುವ ಮಾಹಿತಿ ಪ್ರಕಾರ, ಉಗ್ರರಿಂದ ಹತ್ಯೆಯಾದ ಆರು ಕಾರ್ಮಿಕರು ಪಶ್ಚಿಮ ಬಂಗಾಲ ಮೂಲದವರೇ. ಮೂವರಿಂದ ನಾಲ್ವರು ಉಗ್ರಗಾಮಿಗಳು ಈ ದಾಳಿಯನ್ನು ನಡೆಸಿದ್ದಾರೆ.
ಯುರೋಪಿಯನ್ ಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿದ ಮಂಗಳವಾರದಂದೇ ಈ ದಾಳಿ ನಡೆದಿದೆ. ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಮೇಲೆ ಭಾರತ ಅಥವಾ ವಿದೇಶದ ಜನಪ್ರತಿನಿಧಿಗಳು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ಸೋಮವಾರದಂದು ಉಧಂಪುರ್ ನ ಟ್ರಕ್ ಚಾಲಕನನ್ನು ಅನಂತ್ ನಾಗ್ ನಲ್ಲಿ ಉಗ್ರರು ಕೊಂದಿದ್ದರು. ಅಕ್ಟೋಬರ್ ಇಪ್ಪತ್ನಾಲ್ಕರಂದು ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರದ ಹೊರಗಿನ ಟ್ರಕ್ ಚಾಲಕನನ್ನು ಉಗ್ರರು ಹತ್ಯೆ ಮಾಡಿದ್ದರು. ಅಕ್ಟೋಬರ್ ಹದಿನಾಲ್ಕನೇ ತಾರೀಕು ಇಬ್ಬರು ಉಗ್ರರು ರಾಜಸ್ಥಾನ ನೋಂದಣಿ ಸಂಖ್ಯೆಯ ಟ್ರಕ್ ಚಾಲಕನನ್ನು ಕೊಂದು ಹಾಕಿದ್ದರು. ಶೋಪಿಯಾನ್ ಜಿಲ್ಲೆಯಲ್ಲಿ ಒಬ್ಬರ ಮೇಲೆ ಹಲ್ಲೆ ನಡೆದಿತ್ತು.