ಭಾವುಕ ಚಿತ್ರ: ಯುದ್ಧವಷ್ಟೇ ಅಲ್ಲ, ನಮಗೆ ಸಂತೈಸೋದೂ ಗೊತ್ತು!
ರಜೆಗೆಂದು ಮನೆಗೆ ಬಂದಿದ್ದ ಮಗ ಕೈಬೀಸುತ್ತ ಹೊರಟಾಗ ಆ ತಂದೆ, ತಾಯಿಗೆ ಗೊತ್ತಿರಲಿಲ್ಲ... ಇನ್ನೆಂದೂ ಈ ಮಗನನ್ನು ತಾವು ಜೀವಂತವಾಗಿ ನೋಡೋದೇ ಇಲ್ಲ ಅಂತ. ಕೆಲವು ದಿನಗಳ ನಂತರ ಮಗ ಮತ್ತೆ ಮನೆಗೆ ಬಂದ... ಆದರೆ ಪಾರ್ಥಿವ ಶರೀರವಾಗಿ!
ಅದೆಷ್ಟು ಸೈನಿಕರ ಬದುಕಲ್ಲಿ ಇಂಥದೇ ಕತೆ ಆಗಿಹೋಗಿಲ್ಲ?! ಇತ್ತೀಚೆಗಷ್ಟೇ ಹುತಾತ್ಮರಾದ ಲಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರ ಕುಟುಂಬದ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಆದರೆ ವಾನಿ ಅವರ ಅಂತ್ಯಕ್ರಿಯೆ ಸಮಯದಲ್ಲಿ ದುಃಖತಪ್ತರಾದ ಅವರ ತಂದೆಯನ್ನು ಸೈನಿಕರೊಬ್ಬರು, 'ನೀವು ಒಂಟಿಯಲ್ಲ' ಎನ್ನುತ್ತ ಸಂತೈಸುತ್ತಿರುವ ಚಿತ್ರ ಮಾನವೀಯತೆಯ ಬಗೆಗಿನ ವಿಶ್ವಾಸವನ್ನು ಉಳಿಸುತ್ತದೆ.
ಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದ
ಯುದ್ಧಕ್ಕೆ ಸೈ ಎನ್ನುವ, ರಕ್ಷಣೆ ಎಂದೊಡನೆ ಜೀವ ತೊರೆಯಲೂ ಸಜ್ಜಾಗುವ ಸೈನಿಕರೊಳಗಿರುವ ಮಾನವೀಯ ಅಂತಃಕರಣದ ಪ್ರತೀಕವಾಗಿ ಈ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಎಡಿಜಿ ಪಿಐ-ಇಂಡಿಯನ್ ಆರ್ಮಿ ಖಾತೆಯಿಂದ ಶೇರ್ ಮಾಡಲಾಗಿದೆ.
A serving #IndianArmy officer consoling father of Lance Naik Nazir Ahmad of 34 Rashtriya Rifles, who lost his life fighting terrorists in #Shopian in Kulgam district of J&K. #IndianArmy #SalutingtheBraveheart #Braveheart @PIB_India @SpokespersonMoD pic.twitter.com/k2Yklmf1Ev
— ADG PI - INDIAN ARMY (@adgpi) November 28, 2018
ನ.25 ರಂದು ಜಮ್ಮು, ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರು ಜನ ಉಗ್ರರು ಮೃತರಾಗಿದ್ದರು, ಈ ಸಂದರ್ಭದಲ್ಲಿ ಗಾಯಗೊಂಡ ವಾನಿ, ನಂತರ ಚಿಕಿತ್ಸೆ ಫಲಕಾರಿಯಾದ ಹುತಾತ್ಮರಾದರು.
ಶೋಪಿಯಾನ್ ಜಿಲ್ಲೆಯಲ್ಲಿ ಆರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಕುಲ್ಗಾಂನವರಾದ ವಾನಿ, ತಂದೆ-ತಾಯಿ, ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಯ್ಯಕ್ರಿಯೆಗೆಂದು ಸಹಸ್ರಾರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಾನಿ ಅವರ ಮೃತದೇಹ ಕಂಡು ಬಿಕ್ಕುತ್ತಿದ್ದ ಅವರ ತಂದೆಯನ್ನು ಯೋಧರೊಬ್ಬರು ತಬ್ಬಿ ಹಿಡಿದು, 'ನೀವು ಒಂಟಿಯಲ್ಲ' ಎಂದು ತಬ್ಬಿ ಹಿಡಿದ ಚಿತ್ರ ಕರುಳು ಕಿವುಚುವಂತೆ ಮಾಡುತ್ತದೆ. ಶಿಸ್ತಿನ ಸಿಪಾಯಿ, ಒರಟು ಸ್ವಭಾವದ ಪ್ರತಿ ಯೋಧನಲ್ಲೂ ಇರುವ ಮಾನವೀಯ ಅಂತಃಕರಣದ ಅಭಿವ್ಯಕ್ತಿಯಾಗಿ ಈ ಚಿತ್ರ ಕಾಣಿಸುತ್ತದೆ.
ಒಂದು ಕಾಲದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ವಾನಿ ನಂತರ ತಮ್ಮ ತಪ್ಪಿನ ಅರಿವಾಗಿ ಭಾರತೀಯ ಸೇನೆ ಸೇರಿ ದೇಶಸೇವೆ ಮಾಡುತ್ತಿದ್ದರು. ನಂತರ ದೇಶಕ್ಕಾಗಿಯೇ ಅವರು ಪ್ರಾಣತ್ಯಾಗ ಮಾಡಿದರು.