ಲಡಾಖ್: ಏಷ್ಯಾದ ಅತಿ ಉದ್ದದ ಸುರಂಗಮಾರ್ಗ ಕಾಮಗಾರಿ ವೀಕ್ಷಿಸಿದ ಗಡ್ಕರಿ
ಶ್ರೀನಗರ, ಸೆಪ್ಟೆಂಬರ್ 28: ಭಾರತದ ಲಡಾಖ್ನ ಕಾರ್ಗಿಲ್ ಜಿಲ್ಲೆಯ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಝೊಜಿಲಾ ಸುರಂಗಮಾರ್ಗವನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ವೀಕ್ಷಿಸಿದರು.
30 ವರ್ಷಗಳಿಂದ ಲಡಾಖ್ ಜನರು ನಿರೀಕ್ಷಿಸಿದ್ದ ಕನಸು ಇಂದು ನನಸಾಗಲಿದ್ದು, ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಯು ಈ ಸುರಂಗ ನಿರ್ಮಾಣ ಯೋಜನೆ ಹೊಣೆ ಹೊತ್ತುಕೊಂಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಎಂಜಿನಿಯರಿಂಗ್ ನಿರ್ಮಾಣ ಎನಿಸಿಕೊಂಡಿದೆ.
ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ ಝೊಜಿಲಾ ಸುರಂಗ ಪರಿಶೀಲಿಸಿದ್ದು, 14.15 ಕಿ.ಮೀ ಸುರಂಗಮಾರ್ಗ ಇದಾಗಿದೆ ಎಂದಿದ್ದಾರೆ.
ಶ್ರೀನಗರ- ಕಾರ್ಗಿಲ್- ಲೇಹ್ ಸಂಪರ್ಕ ಬೆಸೆಯುವಲ್ಲಿ ಈ ಸುರಂಗಮಾರ್ಗ ಮಹತ್ವದ ಪಾತ್ರ ನಿಭಾಯಿಸಲಿದ್ದು, ವಿಶ್ವದ ಅತಿ ಅಪಾಯಕಾರಿ ರಸ್ತೆಗಳಲ್ಲಿ ಇದೂ ಒಂದಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲಾಗಿದ್ದು, ಚೀನಾ ಮತ್ತು ಪಾಕಿಸ್ತಾನ ಗಡಿಯ ಸನಿಹದಲ್ಲಿ ಈ ಸುರಂಗಮಾರ್ಗವಿದೆ. ದೇಶದ ಭದ್ರತೆ ದೃಷ್ಟಿಯಿಂದ ತುಂಬಾ ಪ್ರಾಮುಖ್ಯತೆ ಪಡೆದಿದೆ.
ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಇನ್ನಿಲ್ಲದಂತಾಗಿದೆ. ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆ ಮಾಡಲು ಕೆಟ್ಟ ಹವಾಮಾನ ದೊಡ್ಡ ಸವಾಲಾಗಿ ಪರಿಣಮಿಸಿದ್ದ ಕಾರಣ, ಸ್ಥಳೀಯರು 30 ವರ್ಷಗಳಿಂದ ಈ ಸುರಂಗಮಾರ್ಗಕ್ಕೆ ಬೇಡಿಕೆ ಇಟ್ಟಿದ್ದರು.
ಸುರಂಗದಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ, ಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿ ಅಲಾರಾಂ ಸೇರಿದಂತೆ ಹಲವು ಸೌಕರ್ಯಗಳಿವೆ.
ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಚಾಲನೆ ನೀಡಿದ್ದರು. ಏಷ್ಯಾದ ಅತ್ಯಂತ ಉದ್ದದ ಈ ಸುರಂಗವು ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಾಪಾಡಲು ನೆರವಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ-1ರ ಮೂಲಕ ಶ್ರೀನಗರ ಕಣಿವೆ ಮತ್ತು ಲೇಹ್ (ಲಡಾಖ್ ಪ್ರಸ್ಥಭೂಮಿ) ನಡುವೆ ಸರ್ವಋತು ಸಂಪರ್ಕ ಒದಗಿಸುವ ಈ ರಸ್ತೆಯು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆ ಕಾಪಾಡುವ ದೃಷ್ಟಿಯಿಂದಲೂ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಝೊಜಿಲಾ ಸುರಂಗಮಾರ್ಗವು ಸೇವೆಗೆ ಸಮರ್ಪಣೆಗೊಂಡ ನಂತರ ಶ್ರೀನಗರ- ಲೇಹ್ ರಾಷ್ಟ್ರೀಯ ಹೆದ್ದಾರಿ-1ರ ಸಂಚಾರವು ಭೂ ಕುಸಿತದ ಆತಂಕದಿಂದ ಮುಕ್ತವಾಗುತ್ತದೆ. ಸಂಚಾರ ಸುರಕ್ಷೆ ಸುಧಾರಿಸುವ ಜೊತೆಗೆ ಸಂಚಾರದ ಅವಧಿಯನ್ನು 3.15 ತಾಸು ಕಡಿಮೆ ಮಾಡುತ್ತದೆ. 6800 ಕೋಟಿ ರೂ. ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುವ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೂ ಈ ಸುರಂಗ ಪೂರಕವಾಗಿದ್ದು, ಸುರಂಗ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ಶಕ್ತಿ ತುಂಬಲಿದೆ.
ಗಡಿ ಪ್ರದೇಶದಲ್ಲಿರುವ ಈ ಸುರಂಗ ಮಾರ್ಗವು ತುರ್ತು ಪರಿಸ್ಥಿತಿಯಲ್ಲಿ ಸೇನಾಪಡೆ, ಯುದ್ಧೋಪಕರಣಗಳು ಮತ್ತು ಯುದ್ಧ ಟ್ಯಾಂಕ್ಗಳನ್ನು ಗಡಿಯಲ್ಲಿ ನಿಯೋಜಿಸಲು ಅನುಕೂಲ ಕಲ್ಪಿಸಲಿದೆ.
ಝೊಜಿಲಾ
ಯೋಜನೆಯ
ವಿಶೇಷತೆಗಳು
*
ಶ್ರೀನಗರ,
ದ್ರಾಸ್,
ಕಾರ್ಗಿಲ್
ಮತ್ತು
ಲೇಹ್
ಪ್ರದೇಶದಳಿಗೆ
ಝೊಜಿಲಾ
ಸುರಂಗವು
ಸರ್ವಋತು
ಸಂಪರ್ಕ
ಕಲ್ಪಿಸುತ್ತದೆ.
* ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣದಿಂದ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿದುಕೊಳ್ಳುವ ಈ ಪ್ರದೇಶಗಳಲ್ಲಿ ನಿರಂತರ ರಸ್ತೆ ಸಂಪರ್ಕದ ಸಾಧ್ಯತೆಯನ್ನು ಮುಕ್ತವಾಗಿರಿಸುತ್ತದೆ.
* ಆರಂಭಿಕ ಕಾರ್ಯಗಳು ಮುಗಿದ ನಂತರ ಈ ರಸ್ತೆಯ ಮಹತ್ವದ ಹಂತಕ್ಕೆ ಅಕ್ಟೋಬರ್ 2020ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು.
* ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಈ ರಸ್ತೆ ನಿರ್ಮಾಣದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
* ಕಾರ್ಗಿಲ್ ಮತ್ತು ಲಡಾಖ್ ಪ್ರದೇಶದ ಜನರು ಕಳೆದ 30 ವರ್ಷಗಳಿಂದಲೂ ಈ ರಸ್ತೆ ನಿರ್ಮಾಣವಾಗಬೇಕು ಎಂದು ಬೇಡಿಕೆಯಿಟ್ಟಿದ್ದರು.
* ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆಗೆ ಕೆಟ್ಟ ಹವಾಮಾನವು ದೊಡ್ಡ ಸವಾಲಾಗಿತ್ತು. ಹೀಗಾಗಿ ಸುರಂಗ ಮಾರ್ಗ ನಿರ್ಮಾಣವಾಗಬೇಕು ಎಂದು ಜನರು ಕೋರುತ್ತಿದ್ದರು.
* 2013ರ ಯುಪಿಎ ಆಡಳಿತದಲ್ಲಿಯೇ ಈ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಕೊನೆಗೆ ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿತು.
* ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಖ್ಯಾತಿ ಪಡೆದಿದೆ. ಕೇವಲ ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿದ ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದ್ದರು.
* ಸುರಂಗಕ್ಕಾಗಿ ಆರಂಭದಲ್ಲಿ 10,643 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ 3,835 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
* ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿಯ ಕರೆಗಂಟೆ ಸೇರಿದಂತೆ ಹಲವು ಸೌಕರ್ಯಗಳು ಈ ಸುರಂಗದಲ್ಲಿದೆ. ಈ ಸುರಂಗದಲ್ಲಿ ಗಂಟೆಗೆ 80 ಕಿ.ಮೀ ವೇಗ ಮಿತಿ ಸಂಚಾರ ವಿಧಿಸಲಾಗಿದೆ.