ಜಮ್ಮು ಕಾಶ್ಮೀರದಲ್ಲಿ ಬಿಹಾರ ಕಾರ್ಮಿಕರ ಹತ್ಯೆಗೈದ ಇಬ್ಬರು ಎಲ್ಇಟಿ ಉಗ್ರರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ, ಅಕ್ಟೋಬರ್ 21: ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಇಬ್ಬರು ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರನ್ನು ಬುಧವಾರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ಜಿಲ್ಲೆಯ ವಾನಪೋಹ್ ಪ್ರದೇಶದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಎಲ್ಇಟಿ ಉಗ್ರರನ್ನು ಎನ್ಕೌಂಟರ್ನಲ್ಲಿ ಕೊಂದು ಹಾಕಲಾಗಿದೆ. ಈ ಪೈಕಿ ಒಬ್ಬನು ಲಷ್ಕರ್-ಇ-ತೊಯ್ಬಾ ಸಂಘಟನೆ ಕಮಾಂಡರ್ ಗುಲ್ಜಾರ್ ಅಹ್ಮದ್ ರೇಶಿ ಎಂದು ಕಾಶ್ಮೀರ ಐಜಿಪಿ ಸ್ಪಷ್ಟಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ಎರಡು ವಾರದಲ್ಲಿ ಒಟ್ಟು 15 ಉಗ್ರರ ಹತ್ಯೆ
ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಗೂ ಮುನ್ನ ದಿನ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ಹತರಾಗಿದ್ದು, ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಪೈಕಿ ಒಬ್ಬ ಉಗ್ರನನ್ನು ಆದಿಲ್ ವಾನಿ ಎಂದು ಗುರುತಿಸಲಾಗಿದ್ದು, ಆತ ಉತ್ತರ ಪ್ರದೇಶದ ಸಹರಾನ್ಪುರದ ಬಡಗಿ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ತಿಳಿದು ಬಂದಿತ್ತು.
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಬಿಗಿ ಭದ್ರತೆ
ಜಮ್ಮು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ಹಾಗೂ ಸ್ಥಳೀಯೇತರ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಹತ್ಯೆಯ ನಂತರದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕಣಿವೆ ರಾಜ್ಯದಾದ್ಯಂತ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ವರದಿಗಳ ಪ್ರಕಾರ, ಇತ್ತೀಚಿಗೆ ಅತಿಹೆಚ್ಚು ದಾಳಿಗಳು ನಡೆದ ಶ್ರೀನಗರದ ಹಳೆಯ ನಗರ ಮತ್ತು ದಕ್ಷಿಣ ಕಾಶ್ಮೀರ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.
ಸೂಕ್ತ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ
"ಕಣಿವೆ ರಾಜ್ಯದಲ್ಲಿ ನಡೆದ ಸರಣಿ ಹತ್ಯೆಗಳು ಹೆಚ್ಚಿನ ಭದ್ರತೆಯ ಅಗತ್ಯತೆಯನ್ನು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅಗತ್ಯವಿರುವ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ," ಎಂದು ಹೆಸರು ಹೇಳಲು ಇಚ್ಚಿಸದ ಸೇನಾ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಹತ್ಯೆಗಳು ಸಾರ್ವಜನಿಕರಲ್ಲಿ ಭಯವನ್ನು ಹುಟ್ಟಿಸುವಂತಿದೆ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ಭದ್ರತೆಗೆೆ ಕ್ರಮ ತೆಗೆದುಕೊಳ್ಳಲಾಗಿದೆ. ಅನಿವಾರ್ಯ ಎಂಬ ಕಡೆಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಣಿವೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು
ಶ್ರೀನಗರದಾದ್ಯಂತ ಅನೇಕ ಚೆಕ್ಪೋಸ್ಟ್ಗಳು ಮತ್ತು ರಸ್ತೆ ತಡೆಗಳನ್ನು ನಿರ್ಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬುಲೆಟ್ ಪ್ರೂಫ್ ಮೊಬೈಲ್ ಬಂಕರ್ ವಾಹನಗಳನ್ನು ನಿಯೋಜಿಸಲಾಗಿದೆ. ಕೆಲವು ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಕಡೆಗಳಲ್ಲಿ ಹೈಟೆಕ್ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದೆ. ಶ್ರೀನಗರದ ಲಾಲ್ ಚೌಕ್ನಲ್ಲಿ ಶೋಧನೆಗಾಗಿ ಮಹಿಳಾ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಇಬ್ಬರು ಬಿಹಾರಿ ಕಾರ್ಮಿಕರ ಹತ್ಯೆ ಪ್ರಕರಣದಲ್ಲಿ ಭಾಗಿ
ಕಳೆದ ಅಕ್ಟೋಬರ್ 17ರಂದು ಕುಲ್ಗಾಮ್ ಜಿಲ್ಲೆಯ ವಾನಪೋಹ್ ಪ್ರದೇಶದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಉಗ್ರರ ದಾಳಿಯಲ್ಲಿ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರ ಹತ್ಯೆಯಾಗಿತ್ತು. ಬಿಹಾರ ಮೂಲದ ಕಾರ್ಮಿಕರ ಮೇಲೆ ನಡೆಸಿದ ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ಯುನೈಟೆಡ್ ಲಿಬರೇಷನ್ ಫ್ರೆಂಟ್ ಸಂಘಟನೆ ಹೊತ್ತುಕೊಂಡಿತ್ತು. ಇದರ ಹಿಂದಿನ ದಿನ ಅಂದರೆ ಅಕ್ಟೋಬರ್ 16ರಂದು ಬಿಹಾರ ಮೂಲದ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರ ಒಬ್ಬನನ್ನು ಉಗ್ರರು ಕೊಂದು ಹಾಕಿದ್ದರು.