370ನೇ ರದ್ದತಿ ಬಳಿಕ ಉಗ್ರರ ಮೊದಲ ದಾಳಿಗೆ ಇಬ್ಬರು ಬಲಿ
ಶ್ರೀನಗರ, ಆಗಸ್ಟ್ 28: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಬಳಿಯ ಸತೂರಾ ಎಂಬಲ್ಲಿ ಶಂಕಿತ ಉಗ್ರರು ನಡೆಸಿದ ದಾಳಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ.
ಮಂಗಳವಾರ ನಡೆಸಿದ ಗುಂಡಿನ ದಾಳಿಗೆ ಮಂಜೂರ್ ಅಹ್ಮದ್ ಕೊಹ್ಲಿ ಮತ್ತು ಮೊಹಾದ್ ಖಾದಿರ್ ಎಂಬುವವರು ಮೃತಪಟ್ಟಿದ್ದಾರೆ. ಅವರಿಬ್ಬರೂ ಸಂಬಂಧಿಕರು. ಪೂಂಚ್ ನಿವಾಸಿಗಳಾದ ಅವರು ತ್ರಾಲ್ ಪ್ರದೇಶದಲ್ಲಿ ಅಲೆಮಾರಿಗಳಾಗಿ ಓಡಾಡುತ್ತಿದ್ದರು.
ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ
ಇಬ್ಬರನ್ನೂ ಉಗ್ರರು ಆಗಸ್ಟ್ 20ರಂದು ಅಪಹರಿಸಿದ್ದರು. ಅಂದಿನಿಂದಲೂ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು. ತ್ರಾಲ್ ಪ್ರದೇಶದ ಅರಣ್ಯವೊಂದರಲ್ಲಿ ಅವರ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ಆಗಸ್ಟ್ 5ರ ಬಳಿಕ ನಡೆದ ಮೊದಲ ಉಗ್ರರ ದಾಳಿ ಇದಾಗಿದೆ. ರಾಜ್ಯದೆಲ್ಲೆಡೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದರಿಂದ ಹಾಗೂ ಚಟುವಟಿಕೆಗಳಿಗೆ ನಿರ್ಬಂಧವಿದ್ದಿದರಿಂದ ಉಗ್ರರ ಹಾವಳಿಗೂ ತಡೆಬಿದ್ದಿತ್ತು.
ಉಗ್ರರ ದಾಳಿ ಎಚ್ಚರಿಕೆ ಕೊಯಮತ್ತೂರಿನಲ್ಲಿ ಹೈ ಅಲರ್ಟ್
ಆಗಸ್ಟ್ 20ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಎ ತಯಬಾದ ಉಗ್ರನೊಬ್ಬ ಹತ್ಯೆಯಾಗಿದ್ದರೆ, ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರು. ಮತ್ತೊಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಾಯಗೊಂಡಿದ್ದರು.