"ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆದಿರುವುದೇ ಸುಳ್ಳು"
ಶ್ರೀನಗರ್, ನವೆಂಬರ್.19: ಭಾರತ ಮತ್ತು ಪಾಕಿಸ್ತಾನದ ವಾಸ್ತವ ಗಡಿ ರೇಖೆಯಲ್ಲಿ ಯಾವುದೇ ರೀತಿ ಭಯೋತ್ಪಾದನಾ ಚಟುವಟಿಕೆ ಮತ್ತು ಗುಂಡಿನ ದಾಳಿ ನಡೆದಿಲ್ಲ ಎಂದು ಭಾರತೀಯ ಸೇನಾ ಚಟುವಟಿಕೆಗಳ ನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಪರಮಜಿತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ) ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದು, ಪಾಕಿಸ್ತಾನ ಸೇನೆಯು ಉಗ್ರರಿಗೆ ಬೆಂಗಾಲವಾಗಿ ನಿಂತಿದೆ. ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗೆಗಿನ ವರದಿಗಳೆಲ್ಲ ಸುಳ್ಳು ಎಂದು ಪರಮಜಿತ್ ಸಿಂಗ್ ಹೇಳಿದ್ದಾರೆ.
ಭಾರತೀಯ ಸೇನಾ ದಾಳಿಗೆ 11 ಪಾಕ್ ಯೋಧರು ಸಾವು, 16 ಯೋಧರಿಗೆ ಗಾಯ
ಚಳಿಗಾಲಕ್ಕೂ ಮೊದಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಭಯೋತ್ಪಾದಕರನ್ನು ಭಾರತದ ಗಡಿ ನುಸುಳುವುದಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಈ ಹಿನ್ನೆಲೆ ಪಿಓಕೆಯಲ್ಲಿ ಪಾಕಿಸ್ತಾನವು ಭಾರಿ ಸೈನಿಕರನ್ನು ಗಡಿ ಪ್ರದೇಶದಲ್ಲಿ ನಿಯೋಜಿಸಿದೆ ಎನ್ನುವ ಬಗ್ಗೆ ವರದಿಯಾಗಿತ್ತು.
ನವೆಂಬರ್.13ರಂದು ಗಡಿಯಲ್ಲಿ ಪ್ರತೀಕಾರ ದಾಳಿ:
ಕಳೆದ ನವೆಂಬರ್.13ರಂದು ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 11 ಮಂದಿ ಯೋಧರು ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಸೇನಾ ಯೋಧರು ಮತ್ತು ಮೂವರು ಪಾಕಿಸ್ತಾನ ವಿಶೇಷ ಸೇವಾ ಪಡೆ ಯೋಧರು ಸೇರಿದಂತೆ 11 ಮಂದಿ ಪಾಕಿಸ್ತಾನ ಯೋಧರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿತ್ತು.
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ:
ಪಾಕಿಸ್ತಾನ ಸೇನೆಯು 2020ರಲ್ಲಿ ಕದನ ವಿರಾಮ ಉಲ್ಲಂಘನೆ ಮೂಲಕ ಪದೇ ಪದೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಆರು ತಿಂಗಳಿನಲ್ಲೇ 2000ಕ್ಕಿಂತ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಅಂಕಿ ಅಂಶಗಳ ಮೂಲಕ ಗೊತ್ತಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ. ಜೂನ್ ಮೊದಲ 10 ದಿನಗಳಲ್ಲೇ 114 ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. 2019ರ ಜೂನ್ ಮೊದಲ 10 ದಿನಗಳಲ್ಲಿ 118 ಬಾರಿ ಕದನ ವಿರಾಮ ಉಲ್ಲಂಘಿಸಿದ್ದರೆ, 2018ರಲ್ಲಿ ಇದೇ ಅವಧಿಯಲ್ಲಿ ಕೇವಲ 14 ಬಾರಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿತ್ತು.