ಐದಡಿ ಎತ್ತರದ ಪಾಕ್ ಉಗ್ರ ನವೀದ್ ಜಾತ್ ಖತರ್ನಾಕ್ 'ಪರಾರಿ ಕಲಾವಿದ'!
ಬೆಂಗಳೂರು, ನವೆಂಬರ್ 28 : ಆತನ ಎತ್ತರ ಕೇವಲ 5 ಅಡಿ ಎತ್ತರ. ಆತ 'ಪರಾರಿ ಕಲಾವಿದ' ಎಂದೇ ಕುಖ್ಯಾತಿ ಗಳಿಸಿದ್ದ. ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳಿರುವಾಗ ಜೂನ್ 14ರಂದು ಆತ, ಪತ್ರಕರ್ತ ಬುಖಾರಿಯನ್ನು ಹತ್ಯೆಗೈಯುವ ನಾಲ್ಕು ತಿಂಗಳು ಮೊದಲು ಪೊಲೀಸರ ಹಿಡಿತದಿಂದ ಪರಾರಿಯಾಗಿದ್ದ.
ಆತನ ಹೆಸರು ನವೀದ್ ಜಾತ್, ವಯಸ್ಸು ಕೇವಲ 20. 2008ರ ನವೆಂಬರ್ 26ರಂದು ಮುಂಬೈನಲ್ಲಿ ರಕ್ತದೋಕುಳಿ ನಡೆಸಿ ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಕಸಬ್ ಜೊತೆ ಲಷ್ಕರ್-ಇ-ತೈಬಾ ಕ್ಯಾಂಪ್ ನಲ್ಲಿ ನವೀದ್ ಜಾತ್ ಕೂಡ ತರಬೇತಿ ತರಬೇತಿ ಪಡೆದುಕೊಂಡಿದ್ದ ಖತರ್ನಾಕ್ ಉಗ್ರ.
ಅತ್ಯಂತ ರಹಸ್ಯವಾಗಿ ಅಂದು ನಡೆದಿತ್ತು ಅಜ್ಮಲ್ ಕಸಬ್ ಗಲ್ಲು ಶಿಕ್ಷೆ
ಅಂದು ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ, ಶ್ರೀನಗರ ಸೆಂಟ್ರಲ್ ಜೈಲಿನಿಂದ ಆತನನ್ನು ತಪಾಸಣೆಗೆಂದು ಆಸ್ಪತ್ರೆಯೊಂದಕ್ಕೆ ಕರೆದೊಯ್ಯುತ್ತಿದ್ದಾಗ ಆತ ಪರಾರಿಯಾಗಿದ್ದ. ಆತನನ್ನು ಬಚಾವ್ ಮಾಡಲೆಂದು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಕೂಡ ಹತರಾಗಿದ್ದರು. ನಾಲ್ಕು ತಿಂಗಳ ನಂತರ 'ರೈಸಿಂಗ್ ಕಾಶ್ಮೀರ' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಅವರ ಕಚೇರಿಯ ಎದುರಿಗೇ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ ಪಾತಕಿ ನವೀದ್ ಜಾತ್.
ಇಂಥ ಖತರ್ನಾಕ್ ಭಯೋತ್ಪಾದಕನನ್ನು ಕೊನೆಗೂ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಬುಧವಾರ ಯಶಸ್ವಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನ ಕುತ್ಪೋರಾ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್ಕೌಂಟರ್ ನಲ್ಲಿ ನವೀದ್ ಜಾತ್ ನನ್ನು ಹತ್ಯೆಗೈಯಲಾಗಿದೆ.
ಕಸಬ್ ಜೊತೆ ಮದ್ರಸಾದಲ್ಲಿ ಜಾತ್ ತರಬೇತಿ
ಕುಳ್ಳ ನವೀದ್ ಜಾತ್ ಪಾಕಿಸ್ತಾನದ ಮದ್ರಸಾದಲ್ಲಿ ಉಗ್ರ ಅಜ್ಮಲ್ ಕಸಬ್ ಗುಂಪಿನ ಜೊತೆ ತರಬೇತಿ ಪಡೆದು 2012ರಲ್ಲಿ ದೇಶದ ಗಡಿಯನ್ನು ದಾಟಿ ಹಿಂಸಾಚಾರ ಎಸಗುವ ಉದ್ದೇಶದಿಂದ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದ. ಅದೇ ವರ್ಷ 2012ರ ನವೆಂಬರ್ 21ರಂದು ಆತನೊಂದಿಗೆ ತರಬೇತಿ ಪಡೆದು ಮುಂಬೈನಲ್ಲಿ ರಕ್ತದೋಕುಳಿ ನಡೆಸಿ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಪರಾರಿಯಾಗಿ ಓಡಿಹೋಗುವ ವಿಡಿಯೋ ವೈರಲ್
ಕಳೆದ ಫೆಬ್ರವರಿಯಲ್ಲಿ ಆತ ಪರಾರಿಯಾಗಿದ್ದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆತ ಪರಾರಿಯಾಗುವಾಗ ಜಮ್ಮು ಮತ್ತು ಕಾಶ್ಮೀರದ ಹಿಮತುಂಬಿದ ಅರಣ್ಯದಲ್ಲಿ, ಪಾಕ್ ಉಗ್ರರು ಧರಿಸುವ ಹಸಿರು ದಿರಿಸಿನಲ್ಲಿ ಓಡಿಹೋಗುವ ವಿಡಿಯೋ ಕೂಡ ವೈರಲ್ ಆಗಿತ್ತು. ಆತ ಥೇಟ್ ಹವಾಮಾನ ವರದಿಗಾರನಂತೆ ಅಲ್ಲಿ ಬಿದ್ದಿದ್ದ ಹಿಮ ಮತ್ತು ಚಳಿಯ ಬಗ್ಗೆ ವರ್ಣನೆ ಮಾಡಿದ್ದ. ಇದು ಅಂಥಿಂಥ ಬರ್ಫ್ ಅಲ್ಲ ಭಾರೀ ಖತರ್ನಾಕ್ ಬರ್ಫ್ ಎಂದು ಆತ ಆ ವಿಡಿಯೋದಲ್ಲಿ ಹೇಳಿದ್ದ.
ಬೆಚ್ಚಿಬೀಳಿಸಿದ್ದ ಬುಖಾರಿ ಹತ್ಯೆ ಪ್ರಕರಣ: ಕೊಲೆಗಾರನನ್ನು ಕೊಂದ ಸೇನೆ
ಸೇನೆಯ ಗುಂಡಿಗೆ ಜಾತ್ ಕಡೆಗೂ ಬಲಿ
ಬುದ್ಗಾಮ್ ಗ್ರಾಮದಲ್ಲಿ ಆತ ಮತ್ತೊಬ್ಬ ಉಗ್ರನೊಂದಿಗೆ ಅವಿತಿರುವ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆಗೆ ಬುಧವಾರ ಬೆಳಗಿನ ಜಾವ ಅಣಿಯಾಗಿದ್ದಾರೆ. ಆಗ ಎರಡೂ ಬಣಗಳ ನಡುವೆ ಭಾರೀ ಗುಂಡಿನ ಚಕಮಕಿಯಾಗಿದೆ. ಕನಿಷ್ಠ ಆರು ಬಾರಿ ಪೊಲೀಸರಿಗೆ ಮತ್ತು ಭಾರತೀಯ ಸೈನಿಕರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ನವೀದ್ ಜಾತ್ ಕಡೆಗೂ ಪೊಲೀಸರು ಮತ್ತು ಸೇನೆಯ ಗುಂಡಿಗೆ ಸಿಲುಕಿ ಹತನಾಗಿದ್ದಾನೆ.
26/11 ಮುಂಬೈ ದಾಳಿಯಲ್ಲಿ ಆ ಮಹಿಳೆ ರಹಸ್ಯ ಹೊರಗೆ ಬರಲಿಲ್ಲ!
ಮುಂಬೈ ದಾಳಿಯ ರೂವಾರಿಗೆ ಹತ್ತಿರವಾಗಿದ್ದ ಜಾತ್
2008ರ ನವೆಂಬರ್ 26ರ ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಇ-ತೈಬಾದ ಮುಖ್ಯಸ್ಥ ಝಾಕಿ-ಉರ್-ರೆಹಮಾನ್ ಗೆ ತುಂಬಾ ಹತ್ತಿರವಾಗಿದ್ದ ನವೀದ್ ಜಾತ್, ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯ ನೇತೃತ್ವ ವಹಿಸಲು ಸಿದ್ಧತೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹತ್ಯೆ ಭಾರತದ ಭದ್ರತಾ ಸಿಬ್ಬಂದಿಯ ಮಹತ್ವದ ಯಶಸ್ಸಾಗಿದೆ. ಕಾಶ್ಮೀರದ ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದ ನವೀದ್ ಜಾತ್ ಸಾವಿನಿಂದ ಉಗ್ರರ ಒಂದು ಪಡೆಯ ಹುಟ್ಟಡಗಿಸಿದಂತಾಗಿದೆ.
ಅಮಿತಾಬ್ ಬಚ್ಚನ್ ನೋಡಲು ಬಂದಿದ್ದೆ ಎಂದಿದ್ದ 26/11ರ ದಾಳಿಯ ಉಗ್ರ ಕಸಬ್