ಕಣಿವೆ ರಾಜ್ಯದಲ್ಲಿ ಬಾಲ ಬಿಚ್ಚಿದ ಇಬ್ಬರು ಉಗ್ರರ ಬಾಲ ಕಟ್!
ಶ್ರೀನಗರ, ನವೆಂಬರ್.26: ಕಣಿವೆ ರಾಜ್ಯದಲ್ಲಿ ಅಡಗಿದ್ದ ಉಗ್ರ ಹುಟ್ಟಡಗಿಸುವಲ್ಲಿ ಭಾರತೀಯ ಸೇನೆ ಸಕ್ಸಸ್ ಆಗಿದೆ. ಜಮ್ಮು-ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಇಬ್ಬರೂ ಉಗ್ರರನ್ನ ಸೇನೆ ಹೊಡೆದುರುಳಿಸಿದ್ದು, ಈ ಬಗ್ಗೆ ಸೇನಾ ಮೇಜರ್ ಜನರಲ್ ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಭಾರತೀಯ ಸೇನಾ ಯೋಧರು ಕಾರ್ಯಾಚರಣೆಗೆ ಇಳಿದರು. ನವೆಂಬರ್.25ರ ಸೋಮವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆಗೆ ಇಳಿದ ಸೇನೆ ಒಬ್ಬ ಉಗ್ರನನ್ನು ಹೊಡೆದುರುಳಿಸಿದೆ.
ಕಣಿವೆ ರಾಜ್ಯದಲ್ಲಿ ಕಲ್ಲು ತೂರಿದ್ದಕ್ಕೆ 765 ಮಂದಿ ಬಂಧನ!
ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಮೇಜರ್ ಜನರಲ್ ಅನಿಂದ್ಯಾ ಸೇನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಸೇನಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇಂದು ಬೆಳಗ್ಗೆ ಕೂಡಾ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಮೇಜರ್ ತಿಳಿಸಿದ್ದಾರೆ.
ಶೋಪಿಯಾನ್ ನಲ್ಲಿ ಉಗ್ರ ಚಟುವಟಿಕೆ:
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಉಗ್ರರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 6ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದ ಭಾರತೀಯ ಯೋಧರು ನಿನ್ನೆಯೇ ಒಬ್ಬ ಉಗ್ರನನ್ನು ಹತ್ಯೆಗೈದರು.
ನವೆಂಬರ್.26ರಂದು ಮತ್ತೊಬ್ಬ ಉಗ್ರನನ್ನು ಹೊಡೆದುರುಳಿಸಿದ್ದು, ಸೇನಾ ಕಾರ್ಯಾಚರಣೆಯನ್ನು ಸಾಕಷ್ಟು ಮುಂಜಾಗರೂಕತೆಯಿಂದ ಮಾಡಲಾಗಿದೆ. ಸೇನಾ ಕಾರ್ಯಾಚರಣೆಯಲ್ಲಿ ಶೋಪಿಯಾನ್ ಪ್ರದೇಶದಲ್ಲಿನ ಯಾವುದೇ ನಾಗರಿಕರಿಗೆ ತೊಂದರೆ ಆಗಿಲ್ಲ ಎಂದು ಮೇಜರ್ ಜನರಲ್ ಅನಿಂದ್ಯಾ ಸೇನ್ ಗುಪ್ತಾ ಮಾಹಿತಿ ನೀಡಿದ್ದಾರೆ.