"ಉರಿ ಸೆಕ್ಟರ್ ಗಡಿ ನುಸುಳಿದ ನುಸುಳುಕೋರರ ಸದೆ ಬಡೆಯಲು ಸೇನೆ ಸನ್ನದ್ಧ"
ಶ್ರೀನಗರ್, ಸೆಪ್ಟೆಂಬರ್ 21: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಈ ವರ್ಷ ಅತಿಹೆಚ್ಚು ಉಗ್ರರ ನುಸುಳುವಿಕೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಎರಡನೇ ದಿನವೂ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.
ಸೋಮವಾರ ಬೆಳಗ್ಗೆಯಿಂದ ಉತ್ತರ ಕಾಶ್ಮೀರದ ಉರಿ ಸೆಕ್ಟರ್ ಪ್ರದೇಶದಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಸೆಪ್ಟೆಂಬರ್ 18 ಶನಿವಾರ ಸಂಜೆ ವೇಳಗೆ ಉಗ್ರರು ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಕಳೆದ 2016ರ ಇದೇ ಸೆಪ್ಟೆಂಬರ್ 18ರಂದು ಉತ್ತರ ಕಾಶ್ಮೀರದಲ್ಲಿರುವ ಉರಿ ಸೆಕ್ಟರ್ ಸೇನಾ ನೆಲೆಗಳ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಅಂದು ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆಯ 19 ಯೋಧರು ಪ್ರಾಣತ್ಯಾಗ ಮಾಡಿದ್ದರು, ಇಂಥ ಕಹಿ ನೆನಪಿಗೆ ಐದು ವರ್ಷ ಪೂರೈಸಿದ ಸಂದರ್ಭದಲ್ಲೇ ಉಗ್ರರು ಮತ್ತೆ ಗಡಿ ಪ್ರವೇಶಿಸುವುದಕ್ಕೆ ಯತ್ನಿಸಿರುವುದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಪಾಕಿಸ್ತಾನದಿಂದ 6 ನುಸುಳುಕೋರ ಉಗ್ರರ ತಂಡವು ಗಡಿ ಪ್ರವೇಶಿಸಿದೆ. ಈ ನುಸುಳುವಿಕೆ ಸಂದರ್ಭದಲ್ಲಿ ಉಗ್ರರ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಗಾಯಗೊಂಡಿದ್ದಾರೆ.
ಉಗ್ರರ ಮೂಲ ನೆಲೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆಯು ಹಲವಾರು ಭಯೋತ್ಪಾದಕ ಲಾಂಚ್ ಪ್ಯಾಡ್ಗಳನ್ನು ಹೊಡೆದುರುಳಿಸಿದೆ. ನುಸುಳುಕೋರರನ್ನು ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ. ಆದರೆ ಮೂಲನೆಲೆದ ನಿಖರ ಮಾಹಿತಿ ಹಾಗೂ ಸ್ಥಿತಿ ಹೇಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸೇನೆ ಹೇಳಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಉಗ್ರರ ನುಸುಳುವಿಕೆ ಇದು 2ನೇ ಬಾರಿ
ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಾದ ಬಳಿಕ ಉಗ್ರರು ನಡೆಸಿರುವ ಎರಡನೇ ನುಸುಳುವಿಕೆ ಪ್ರಯತ್ನ ಇದಾಗಿದೆ. ಆದರೆ ಅಂದಿನಿಂದ ಯಾವುದೇ ಕದನ ವಿರಾಮ ಉಲ್ಲಂಘನೆ ವರದಿಯಾಗಿಲ್ಲ ಮತ್ತು ಪಾಕಿಸ್ತಾನದಿಂದ ಯಾವುದೇ ರೀತಿ ಪ್ರಚೋದಿತ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆ ಹೇಳಿದೆ.
ಯಾವುದೇ ರೀತಿ ಪ್ರಚೋದಿನ ಗುಂಡಿನ ದಾಳಿ ನಡೆದಿಲ್ಲ
"ಈ ವರ್ಷ ಕದನ ವಿರಾಮ ಉಲ್ಲಂಘನೆ ಆಗಿಲ್ಲ. ನಾವು ಯಾವುದೇ ರೀತಿ ಕದನ ವಿರಾಮ ಉಲ್ಲಂಘನೆಗೆ ಸಿದ್ಧರಿದ್ದೇವೆ. ಆದರೆ ನಾವು ಗಡಿಯಿಂದ ಯಾವುದೇ ರೀತಿ ಪ್ರಚೋದನೆ ನೀಡಿಲ್ಲ" ಎಂದು 15 ಕಾರ್ಪ್ಗಳ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಹಿಂದಿಗಿಂತ ಈ ವರ್ಷ ಕೆಲವು ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಸೇನೆಯು ಉರಿ ಸೆಕ್ಟರ್ ನಲ್ಲಿ ನುಸುಳುಕೋರರಿಗಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಉಗ್ರರು ನುಸುಳಿ ವಾಪಸ್ ಹೋದರೇ ಎಂಬುದು ಸ್ಪಷ್ಟವಿಲ್ಲ
"ಉರಿ ಸೆಕ್ಟರ್ ನಲ್ಲಿ ಕಳೆದ 24 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದರಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನ ನಡೆದಿದೆ ಎಂದು ನಾವು ಭಾವಿಸಿದ್ದೇವೆ. ನಾವು ಅವರನ್ನು ಹುಡುಕುತ್ತಿದ್ದೇವೆ. ಅವರು ಈ ಕಡೆ ಇದ್ದಾರೆಯೇ ಅಥವಾ ಪ್ರಯತ್ನ ಮಾಡಿದ ನಂತರ ಅವರು ವಾಪಸ್ ಹೋಗಿದ್ದಾರೆಯೇ, ಆ ವಿಷಯವನ್ನು ಸ್ಪಷ್ಟಪಡಿಸಲಾಗಿಲ್ಲ ಅಥವಾ ದೃಢೀಕರಿಸಲಾಗಿಲ್ಲ," ಎಂದು ಜನರಲ್ ಪಾಂಡೆ ಹೇಳಿದ್ದಾರೆ.