ಜಮ್ಮು ಕಾಶ್ಮೀರ ಉಗ್ರರ ದಾಳಿಯಲ್ಲಿ ಇಬ್ಬರು ಸಾವು, ಮಾಹಿತಿ ಕೋರಿದ ಪ್ರಧಾನಿ
ಶ್ರೀನಗರ, ಡಿಸೆಂಬರ್ 14: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರ ಹೊರವಲಯದ ಜೆವಾನ್ ವಲಯದಲ್ಲಿರುವ ಪೊಲೀಸ್ ಶಿಬಿರಗಳ ಮೇಲೆ ನಡೆಸಿದ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಪೊಲೀಸ್ ಸಶಸ್ತ್ರ ಪಡೆ ಸಿಬ್ಬಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ಉಗ್ರರ ದಾಳಿಯಲ್ಲಿ ಒಬ್ಬ ಅಸಿಸ್ಟೆಂಟ್ ಸಬ್-ಇನ್ಸ್ ಪೆಕ್ಟರ್ ಹಾಗೂ ಒಬ್ಬ ಸೆಕ್ಷನ್ ಗ್ರೇಡ್ ಆಫೀಸರ್ ಹುತಾತ್ಮರಾಗಿದ್ದಾರೆ. ಗಾಯಗೊಂಡ 12 ಸಿಬ್ಬಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ
ಭದ್ರತಾ ಸಿಬ್ಬಂದಿ ಮತ್ತು ಜಮ್ಮು ಕಾಶ್ಮೀರದ ಸಶಸ್ತ್ರ ಪಡೆ ಸೇರಿದಂತೆ ಹಲವು ಪಡೆಗಳ ಶಿಬಿರವನ್ನು ಹೊಂದಿರುವ ಹೆಚ್ಚು ರಕ್ಷಣಾತ್ಮಕ ಪ್ರದೇಶದಲ್ಲಿಯೇ ಸಶಸ್ತ್ರ ಸಿಬ್ಬಂದಿಯಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಜೆವಾನ್ ವಲಯದಲ್ಲಿ ಈ ಘಟನೆ ನಡೆದಿದೆ. ಇದೇ ಪ್ರದೇಶದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಶುರು ಮಾಡಲಾಗಿದೆ.
ಬುಲೆಟ್ ಪ್ರೂಫ್ ಆಗಿರಲಿಲ್ಲ ಭದ್ರತಾ ಸಿಬ್ಬಂದಿ ಬಸ್:
ಉಗ್ರರ ದಾಳಿ ವೇಳೆ ಜಮ್ಮು ಕಾಶ್ಮೀರ ಸಶಸ್ತ್ರ ಪಡೆ ಸಿಬ್ಬಂದಿಯಿದ್ದ ಬಸ್ ಬುಲೆಟ್ ಪ್ರೂಫ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ಜೊತೆ ಸಶಸ್ತ್ರ ಪಡೆಯ ಪೊಲೀಸರು ಬಂದೂಕುಗಳ ಬದಲಿಗೆ ಗುರಾಣಿಗಳು ಮತ್ತು ಲಾಠಿಗಳನ್ನು ಹೊಂದಿರುತ್ತಾರೆ. ಶಸ್ತ್ರಸಜ್ಜಿತ ಪೋಲೀಸರು ಸಾಮಾನ್ಯವಾಗಿ ಕರ್ತವ್ಯ ಮುಗಿಸಿ ಹಿಂದಿರುಗುವಾಗ ಪೊಲೀಸರೊಂದಿಗೆ ಬರುತ್ತಾರೆ. ಈ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉಗ್ರರ ದಾಳಿ ಬಗ್ಗೆ ಮಾಹಿತಿ ಕೋರಿದ ಪ್ರಧಾನಿ:
ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ವಿವರ ಕೇಳಿದ್ದಾರೆ. ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿವರಗಳನ್ನು ಕೇಳಿದ್ದಾರೆ. ಅವರು ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ" ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಮೆಹಬೂಬ್ ಮುಫ್ತಿ, ಓಮರ್ ಅಬ್ದುಲ್ಲಾ ಸಂತಾಪ:
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಕೂಡ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಉಗ್ರರ ದಾಳಿಯನ್ನು ಓಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ "ಸಾಮಾನ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. "ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯ ಬಗ್ಗೆ ಭಾರತೀಯ ಸರ್ಕಾರದ ಸುಳ್ಳು ನಿರೂಪಣೆಯು ಬಹಿರಂಗವಾಗಿದೆ, ಆದರೆ ಯಾವುದೇ ಕೋರ್ಸ್ ತಿದ್ದುಪಡಿಯಾಗಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಬಂಡಿಪೋರಾದಲ್ಲಿ ದಾಳಿ:
ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಯೋತ್ಪಾದಕರು ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಇಬ್ಬರು ಪೊಲೀಸರು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಅಂಥದ್ದೇ ಘಟನೆ ಮರುಕಳಿಸಿದೆ. ಅಂದು ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ವೈದ್ಯರು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಬಂಡಿಪೋರಾದ ಗುಲ್ಶನ್ ಚೌಕ್ ನಲ್ಲಿ ಡಿಸೆಂಬರ್ 10 ರಂದು ಈ ಘಟನೆ ನಡೆದಿತ್ತು.
ಕಣಿವೆ ರಾಜ್ಯದಲ್ಲಿ ವಲಸಿಗರ ಮೇಲೆ ದಾಳಿ:
ಕಾಶ್ಮೀರದಲ್ಲಿ ವಲಸೆ ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ಮೇಲೆ ಇತ್ತೀಚೆಗೆ ಭಯೋತ್ಪಾದಕರು ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದಾರೆ. ಇದರ ನಡುವೆ ಕಣಿವೆಯಲ್ಲಿ ಇದು ಎರಡನೇ ಪ್ರಮುಖ ಭಯೋತ್ಪಾದಕ ದಾಳಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ನಡೆದ ಎನ್ಕೌಂಟರ್ಗಳ ಸರಣಿಯಲ್ಲಿ ಹಲವು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Recommended Video