ಕಾಶ್ಮೀರದ ಮಾಜಿ ಡಿಎಸ್ಪಿ ದೇವಿಂದರ್ ಸಿಂಗ್ ಸೇವೆಯಿಂದ ವಜಾ
ಶ್ರೀನಗರ, ಮೇ 21: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ನೆರವಾದ ಆರೋಪ ಹೊತ್ತಿರುವ ಮಾಜಿ ಡಿಎಸ್ಪಿ ದೇವಿಂದರ್ ಸಿಂಗ್ರನ್ನು ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಅಧಿಕೃತವಾಗಿ ಪ್ರಕಟಿಸಿದೆ.
''ಸಂವಿಧಾನದ ಆರ್ಟಿಕಲ್ 311 ಅನ್ವಯ ಮಾಜಿ ಡಿಎಸ್ಪಿ ದೇವಿಂದರ್ ಸಿಂಗ್ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ'' ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದೆ.
ಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿ
ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಜೊತೆ ಡಿಎಸ್ಪಿ ದೇವಿಂದರ್ ಸಿಂಗ್ ಇದ್ದಾಗ ಸಿಕ್ಕಿ ಬಿದ್ದಿದ್ದರು. ಉಗ್ರರಿಗೆ ನೆರವಾದ ಕಾರಣಕ್ಕೆ ಬಂಧಿತರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ನಂತರ ಸಿಂಗ್ ಅವರ ಮನೆ, ಕಚೇರಿ ಪರಿಶೀಲಿಸಿ, 32 ಸಾಮಾಗ್ರಿಗಳನ್ನು ಜಪ್ತಿ ಮಾಡಲಾಯಿತು. ಜಪ್ತಿಯಾದ ಸಾಮಾಗ್ರಿಗಳ ಪೈಕಿ ಅತ್ತರ್ ಶೀಶೆಯಿಂದ ಹಿಡಿದು ಎಕೆ 47 ರೈಫಲ್ ತನಕ ಇತ್ತು.
ಶೋಪಿಯನ್ನಲ್ಲಿದ್ದ ನವೀದ್ ಬಾಬು, ಮೀರ್ ಇರ್ಫಾನ್, ರಫಿ ರಥಾರ್ ರನ್ನು ಶ್ರೀನಗರಕ್ಕೆ ಕರೆ ತಂದಿದ್ದ ಸಿಂಗ್ ನಂತರ ನವದೆಹಲಿಗೆ ಕರೆದೊಯ್ಯಲು ಸಜ್ಜಾಗಿದ್ದರು. ಆದರೆ, ಈ ಪ್ರಯತ್ನದಲ್ಲಿರುವಾಗ ಪೊಲೀಸರಿಗೆ ಸೆರೆ ಸಿಕ್ಕಿದ್ದರು.
2001ರಲ್ಲಿ ಸಂಸತ್ ದಾಳಿಯ ವೇಳೆ ದೇವಿಂದರ್ ಸಿಂಗ್, ಬುದ್ಗಾಮ್ನ ವಿಶೇಷ ಕಾರ್ಯಾಚರಣೆ ಗುಂಪಿನ ಉಪ ವರಿಷ್ಠಾಧಿಕಾರಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಭಾಗದ ಹೈಜಾಕ್ ನಿಗ್ರಹ ಘಟಕದ ಸದಸ್ಯರಾಗಿದ್ದ ಅವರು, ಶ್ರೀನಗರದಲ್ಲಿನ ಸೇನಾ ಕಂಟೋನ್ಮೆಂಟ್ ಸಮೀಪದ ಇಂದಿರಾ ನಗರ ಎಂಬಲ್ಲಿ ವಾಸವಿದ್ದರು. 2017ರ ಆಗಸ್ಟ್ 27ರಂದು ಪುಲ್ವಾಮಾದಲ್ಲಿ ಉಗ್ರರ ಜತೆ ಎನ್ಕೌಂಟರ್ ನಡೆಸಿದ್ದ ದೇವಿಂದರ್ ಅವರಿಗೆ 2018ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಶೌರ್ಯ ಪದಕ ಲಭಿಸಿತ್ತು. ಉಗ್ರರನ್ನು ವಿಚಾರಣೆ ನಡೆಸಲು ಕರೆದೊಯ್ಯುತ್ತಿದ್ದೆ ಎಂದು ದೇವಿಂದರ್ ಸಮಜಾಯಿಷಿ ನೀಡಿದ್ದರೂ, ಅವರನ್ನು ಉಗ್ರರಲ್ಲಿ ಒಬ್ಬನೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಸೇವೆಯಿಂದ ಅಮಾನತುಗೊಳಿಸಲಾಗಿದೆ.