ಶೋಪಿಯಾನ್ ಜಿಲ್ಲೆಯಲ್ಲಿ ಆರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಶ್ರೀನಗರ್, ನವೆಂಬರ್ 25: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಉಗ್ರರು ಮೃತಪಟ್ಟು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ರಾತ್ರಿ ಒಂದು ಗಂಟೆ ಹೊತ್ತಿಗೆ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಸುತ್ತುವರಿದು, ಕಪರಣ್ ಹಳ್ಳಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಸೇನೆ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಪ್ರತಿಯಾಗಿ ದಾಳಿ ನಡೆಸಿದ ವೇಳೆ ಒಬ್ಬ ಸೈನಿಕ ಹುತಾತ್ಮರಾಗಿದ್ದು, ಆರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆ ವಕ್ತಾರ ಇದಕ್ಕೂ ಮುನ್ನ ಮಾತನಾಡಿ, ನಾಲ್ವರು ಉಗ್ರಗಾಮಿಗಳು ಹತ್ಯೆಗೀಡಾಗಿದ್ದಾರೆ ಎಂದು ತಿಳಿಸಿದ್ದರು. ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರಗಾಮಿಗಳು ಇರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ.
ಕಾಶ್ಮೀರದಲ್ಲಿ ಉಗ್ರರಿಂದ ಮಾಜಿ ಪೊಲೀಸ್ ಅಧಿಕಾರಿಯ ಅಪಹರಣ, ಹತ್ಯೆ
ಗುಂಡಿನ ಚಕಮಕಿ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶೋಪಿಯಾನ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಬುಧವಾರದಿಂದ ಈಚೆಗೆ ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ನಡೆಯುತ್ತಿರುವ ಮೂರನೇ ಕಾರ್ಯಾಚರಣೆ ಇದು. ಈ ವರೆಗೆ ಮೂರು ಎನ್ ಕೌಂಟರ್ ನಲ್ಲಿ ಹದಿನಾಲ್ಕು ಸ್ಥಳೀಯ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ.
ಕಳೆದ ಶುಕ್ರವಾರ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಅನಂತ್ ನಾಗ್ ಜಿಲ್ಲೆಯಲ್ಲಿ ಆರು ಉಗ್ರಗಾಮಿಗಳನ್ನು ಕೊಲ್ಲಲಾಗಿತ್ತು. ಅದರಲ್ಲಿ ಉಗ್ರ ಸಂಘಟನೆಯ ಮೂವರು ಟಾಪ್ ಕಮ್ಯಾಂಡರ್ಸ್ ಗಳು ಒಳಗೊಂಡಿದ್ದರು. ಬುಧವಾರದಂದು ನಾಲ್ವರು ಉಗ್ರರನ್ನು ಶೋಪಿಯಾನ್ ಜಿಲ್ಲೆಯಲ್ಲಿ ಕೊಲ್ಲಲಾಗಿತ್ತು.