ಕಾಶ್ಮೀರದಲ್ಲಿ ಉಗ್ರರಿಂದ ಐಇಡಿ ಸ್ಫೋಟ; ಯೋಧ ಸಾವು, ಮೂವರಿಗೆ ಗಾಯ
ಶ್ರೀನಗರ, ಜನವರಿ 27: ಉಗ್ರರು ಅಡಗಿಸಿಟ್ಟಿದ್ದ ಐಎಡಿ (ಸುಧಾರಿತ ಸ್ಫೋಟಕ) ಸ್ಫೋಟಗೊಂಡು ಒಬ್ಬ ಯೋಧ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
"ರೋಡ್ ಓಪನಿಂಗ್ ಪಾರ್ಟಿ" ಗುರಿಯಾಗಿಸಿಕೊಂಡು ಈ ಗ್ರೆನೇಡ್ ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಮೀಪದ ಶುಭನ್ ಪೊರಾ ಪ್ರದೇಶದಲ್ಲಿನ ಸರ್ಕಾರಿ ಶಾಲೆಯಲ್ಲಿ ಈ ಸ್ಫೋಟಕವನ್ನಿಡಲಾಗಿದೆ. ಬೆಳಿಗ್ಗೆ ಸುಮಾರು 10.30ರ ವೇಳೆಗೆ ಇದು ಸ್ಫೋಟಗೊಂಡಿದೆ. ಸ್ಫೋಟದಲ್ಲಿ 24 ರಾಷ್ಟ್ರೀಯ ರೈಫಲ್ಸ್ ನ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಒಬ್ಬರು ಮೃತಪಟ್ಟಿದ್ದಾರೆ.
ಶ್ರೀನಗರದಲ್ಲಿ ಓರ್ವ ಉಗ್ರನನ್ನು ಹತ್ಯೆಗೈದ ಭಾರತೀಯ ಸೇನಾಪಡೆ
ದಾಳಿ ಬಗ್ಗೆ ಪ್ರಾಥಮಿಕ ತನಿಖೆ ನಡೆದಿದ್ದು, 24 ರಾಷ್ಟ್ರೀಯ ರೈಫಲ್ಸ್ ನ ಸಿಬ್ಬಂದಿ ಈ ಕಟ್ಟಡವನ್ನು ಹಲವು ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದರು. ಅವರನ್ನು ಉದ್ದೇಶವಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ತನಿಖೆ ತಿಳಿಸಿದೆ.
ದಾಳಿಗೆ ಹಿಂದಿನ ರಾತ್ರಿ ಸ್ಫೋಟಕ ಇರಿಸಲಾಗಿದೆ. ಕೆಲವು ದಿನಗಳಿಂದ ಈ ಪಡೆಯ ಕಾರ್ಯಾಚರಣೆ ಗಮನಿಸಿ ಉಗ್ರರು ಈ ಕೃತ್ಯ ಎಸಗಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಖಿಮೊ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ದಾಳಿಕೋರರಿಗೆ ಶೋಧನಾ ಕಾರ್ಯ ಮುಂದುವರೆದಿದೆ.