ಪ್ರಧಾನಿ ಮೋದಿ ಭೇಟಿಗೂ ಮುನ್ನವೇ ಜಮ್ಮುವಿನಲ್ಲಿ ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಕಾಳಗ
ಶ್ರೀನಗರ, ಏಪ್ರಿಲ್ 22 : ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ಎರಡು ದಿನಗಳ ಮೊದಲೇ ಜಮ್ಮುವಿನ ಸುಂಜ್ವಾನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಇನ್ನು ಈ ಎನ್ಕೌಂಟರ್ನಲ್ಲಿ ಓರ್ವ ಭದ್ರತಾ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಇದೇ ಭಾನುವಾರ ಜಮ್ಮುವಿಗೆ ಆಗಮಿಸುತ್ತಿದ್ದಾರೆ. 2019 ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಪ್ರಧಾನಿ ನೀಡುತ್ತಿರುವ ಮೊದಲ ರಾಜಕೀಯ ಭೇಟಿ ಇದಾಗಿದೆ. ಈ ಭೇಟಿ ಸಂದರ್ಭದಲ್ಲಿ ಪಲ್ಲಿ ಗ್ರಾಮದಲ್ಲಿ ಸಾವಿರಾರು ಪಂಚಾಯತ್ ಸದಸ್ಯರು ಭಾಗವಹಿಸುವ ಪ್ರಮುಖ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಹೀಗಾಗಿ ಪ್ರಧಾನಿ ಆಗಮಿಸುತ್ತಿರುವ ಹಿನ್ನಲೆ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದಾದ್ಯಂತ ಯಾವುದೇ ಭಯೋತ್ಪಾದಕ ಚಟುವಟಿಗಳು ನಡೆಯದಂತೆ ಹಗಲು ರಾತ್ರಿ ಗಸ್ತು ತಿರುಗುತ್ತಿದೆ. ಸದ್ಯಕ್ಕೆ ಸುಂಜ್ವಾನ್ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಮಾಹಿತಿ ಸಿಕ್ಕಿದ್ದು, ಭದ್ರತಾ ಪಡೆಗಳು ಆ ಪ್ರದೇಶವನ್ನ ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪೋರ್ಸ್ ನ ಸಹಾಯಕ ಸಬ್ ಇನ್ಸ್ಪೆಕ್ಟರ್ ಎಸ್.ಪಿ ಪಟೇಲ್, ಸಾವನ್ನಪ್ಪಿದ್ದರು, ಜೊತೆಗೆ ನಾಲ್ವರು ಯೋಧರಾದ ಬಲರಾಜ್ ಸಿಂಗ್, ಅಖ್ನೂರ್ನ ಎಸ್ಪಿಒ ಸಾಹಿಲ್ ಶರ್ಮಾ, ಪರ್ಮೋದ್ ಪತ್ರ ಮತ್ತು ಅಮೀರ್ ಸೋರಾನ್ ಗಾಯಗೊಂಡಿದ್ದಾರೆ ಅಂತ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದೇವೆ ಅಂತ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಸುಂಜ್ವಾನ್ ಪ್ರದೇಶದಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಆಂತ ಸೇನಾ ಮೂಲಗಳು ಹೇಳುತ್ತಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಗುರುವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಿಷೇಧಿತ ಲಷ್ಕರ್ ತೈಬಾ ಸಂಘಟನೆಯ ಉನ್ನತ ಕಮಾಂಡರ್ ಯುಸೂಫ್ ಕಾಂಟ್ರೂ ಮತ್ತು ಇನ್ನೋರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿತ್ತು.
2018ರ ಫೆಬ್ರವರಿಯಲ್ಲೂ ಇದೇ ರೀತಿ ಭಯೋತ್ಪಾದಕರು ಸುಂಜ್ವಾನ್ ಸೇನಾ ಕಂಟೋನ್ಮೇಟ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಹಲವರು ಮಂದಿ ಸಾವನ್ನಪ್ಪಿದ್ದರು.