ಕಾಶ್ಮೀರದ ಸ್ಥಿತಿ ಸುಧಾರಿಸಿದೆ, ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ!
ಶ್ರೀನಗರ್, ಡಿಸೆಂಬರ್.10: ದಿನ ಬೆಳಗಾದರೆ ಗುಂಡಿನ ಮೊರೆತ. ಉದ್ರಿಕ್ತರಿಂದ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್, ಅಶ್ವವಾಯು ಸಿಡಿಸಿದ ಪೊಲೀಸರು, ಹೀಗೆ ಸದಾ ಸದ್ದು ಗದ್ದಲದಿಂದಲೇ ಸದ್ದು ಮಾಡುತ್ತಿದ್ದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಇದೀಗ ಕೂಲ್ ಕೂಲ್ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಈಗ ಮೊದಲಿನಂತೆ ಇಲ್ಲವೇ ಇಲ್ಲ. ಕೇಂದ್ರ ಸರ್ಕಾರದ ಒಂದೇ ಒಂದು ನಿರ್ಧಾರ ಕಣಿವೆ ರಾಜ್ಯದ ಕಳೆಯನ್ನೇ ಬದಲಿಸಿದೆ. ರಾಷ್ಟ್ರದ ಮುಕುಟವಾಗಿರುವ ರಾಜ್ಯ ಶಾಂತಿಯುತವಾಗಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರಕ್ಕೆ ನೀಡಿದ 370ರ ಅಡಿ ನೀಡಿದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ಮೇಲೆ ಪರಿಸ್ಥಿತಿ ಸುಧಾರಿಸಿದೆ. ಇಡೀ ರಾಜ್ಯದಲ್ಲಿ ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಮರುಳಿದೆ. ಜನರೇ ಕೇಂದ್ರ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ:
ಜಮ್ಮು-ಕಾಶ್ಮೀರದಲ್ಲಿ ಬೇಕಾದರೆ ಪರಿಸ್ಥಿತಿಯನ್ನು ಸಹಜ ಸ್ಥಿತಿ ತರಬಹುದು. ಆದರೆ, ಕಾಂಗ್ರೆಸ್ ನಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದಾಗ ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷದ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ನಿರ್ಧಾರದಿಂದ ಜಮ್ಮು-ಕಾಶ್ಮೀರದಲ್ಲಿ ಭಾರಿ ರಕ್ತಪಾತವೇ ನಡೆದು ಹೋಗುತ್ತದೆ ಎಂದು ವ್ಯಾಖ್ಯಾನಿಸಿದ್ದರು. ಆದರೆ, ಅವರ ಊಹಾಪೋಹಗಳೆಲ್ಲವೂ ಹುಸಿಯಾಗಿವೆ. ಜಮ್ಮು-ಕಾಶ್ಮೀರದಲ್ಲಿ 370 ಅಡಿ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಅಲ್ಲಿ ಒಂದೇ ಒಂದು ಗುಂಡಿನ ಸದ್ದು ಕೇಳಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.