ಸೈನಿಕರ ಶೌರ್ಯದ ಹೆಸರಿನಲ್ಲಿ ದೀಪ ಬೆಳಗಿಸಿ: ದೇಶವಾಸಿಗಳಿಗೆ ಮೋದಿ ಮನವಿ
ಶ್ರೀನಗರ ನವೆಂಬರ್ 3: ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಯೋಧರೊಂದಿಗೆ ದೀಪಾವಳಿಯ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ಮೋದಿ ದೀಪಾವಳಿ ಹಬ್ಬವನ್ನು ಆಚರಿಸಲು ನೌಶೇರಾದಲ್ಲಿ ಸೈನಿಕರೊಂದಿಗೆ ಇದ್ದಾರೆ. ಪ್ರಧಾನಿ ಮೋದಿ ಅವರು ಗುರುವಾರ ಬೆಳಗ್ಗೆ 10:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್ನ ಮುಂಭಾಗದ ಪ್ರದೇಶವನ್ನು ತಲುಪಿದರು.
ಈ ವೇಳೆ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಪ್ರಧಾನಿ ಭೇಟಿ ಮತ್ತು ಬೆಳಕಿನ ಹಬ್ಬಕ್ಕೆ ಸಂಬಂಧಿಸಿದಂತೆ ನೌಶೇರಾದಲ್ಲಿ ಭದ್ರತೆ ಬಿಗಿಯಾಗಿದೆ. ಪ್ರಧಾನಿ ಮೋದಿ ಭೇಟಿ ಬಗ್ಗೆ ಸೈನಿಕರಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಪ್ರಧಾನಿ ಭಾಷಣದ ವೇಳೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳೂ ಹಲವು ಬಾರಿ ಮೊಳಗಿದವು. ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಗಡಿ ಹೊರಠಾಣೆಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ಸೈನಿಕರ ಪ್ರಯತ್ನಗಳನ್ನು ಶ್ಲಾಘಿಸಿದರು. ಗುರುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಯೋಧರನ್ನು 'ಮಾ ಭಾರತಿ' (ಭೂಮಿ ತಾಯಿ) 'ಸುರಕ್ಷಾ ಕವಚ' (ರಕ್ಷಣಾತ್ಮಕ ಗುರಾಣಿ) ಎಂದು ಕರೆದರು. ನಾನು ಕುಟುಂಬ ಸದಸ್ಯರೊಂದಿಗೆ ದೀಪಾವಳಿಯನ್ನು ಕಳೆಯಲು ಬಯಸುತ್ತೇನೆ, ಆದ್ದರಿಂದ ನಾನು ನಿಮ್ಮೊಂದಿಗೆ ಹಬ್ಬದಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಹೇಳಿದರು.
"ನಮ್ಮ ಸೈನಿಕರು ಮಾ ಭಾರತಿಯ ಸುರಕ್ಷಾ ಕವಚವಿದ್ದಂತೆ. ನಿಮ್ಮೆಲ್ಲರ ಕಾರಣದಿಂದಾಗಿ ನಮ್ಮ ದೇಶದ ಜನರು ಶಾಂತಿಯುತವಾಗಿ ಮಲಗಲು ಮತ್ತು ಹಬ್ಬಗಳ ಸಮಯದಲ್ಲಿ ಸಂತೋಷದಿಂದ ಇದ್ದಾರೆ. ನಿಮ್ಮ ಸಾಮರ್ಥ್ಯ ಮತ್ತು ಶಕ್ತಿ ದೇಶದ ಭದ್ರತೆ ಶಾಂತಿಯನ್ನು ಖಚಿತಪಡಿಸುತ್ತದೆ. ಹೀಗಾಗಿ ನಾನು ದೇಶವಾಸಿಗಳಲ್ಲಿ ಸೈನಿಕರ ಶೌರ್ಯದ ಹೆಸರಿನಲ್ಲಿ ಇಂದು ದೀಪ ಬೆಳಗಿಸಿ ಎಂದು ಮನವಿ ಮಾಡುತ್ತೇನೆ. ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ" ಎಂದರು.
ಈ ವೇಳೆ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಯೋಧರು ನಿರ್ವಹಿಸಿದ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. "ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಯೋಧರು ನಿರ್ವಹಿಸಿದ ಪಾತ್ರ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯನ್ನು ತಂದಿದೆ" ಎಂದು ಅವರು ಹೇಳಿದರು.
Jammu and Kashmir | Prime Minister Narendra Modi honours and interacts with veterans at Nowshera pic.twitter.com/cTOfpjp9Ly
— ANI (@ANI) November 4, 2021
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಕುರಿತು ಮಾತನಾಡಿದ ಅವರು, "ಬದಲಾಗುತ್ತಿರುವ ಜಗತ್ತು ಮತ್ತು ಯುದ್ಧದ ವಿಧಾನಕ್ಕೆ ಅನುಗುಣವಾಗಿ ನಾವು ನಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ಹೊಂದಿಕೊಳ್ಳಬೇಕು. ಹಿಂದೆ ಭದ್ರತಾ ಪಡೆಗಳಿಗೆ ರಕ್ಷಣಾ ಸಾಧನಗಳನ್ನು ಸಂಗ್ರಹಿಸಲು ವರ್ಷಗಳ ಕಾಲ ತೆಗೆದುಕೊಳ್ಳುತ್ತಿತ್ತು. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಬದ್ಧತೆಯು ಹಳೆಯ ವಿಧಾನಗಳನ್ನು ಬದಲಾಯಿಸುವ ಏಕೈಕ ಮಾರ್ಗವಾಗಿದೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಆಮದುಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದೇವೆ" ಎಂದರು. ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ತಮ್ಮ ಸರ್ಕಾರದ ಪ್ರಯತ್ನಗಳನ್ನು ಎತ್ತಿ ಹಿಡಿದರು.
ಪ್ರಧಾನಿ ಮೋದಿ ಅವರು ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಇದೇ ಮೊದಲಲ್ಲ. 2014 ರಲ್ಲಿ ಅವರು ಪ್ರಧಾನಿಯಾದಾಗಿನಿಂದ, ಪ್ರಧಾನಿ ಮೋದಿ ಅವರು ದೀಪಾವಳಿಯಂದು ಗಡಿ ಔಟ್ಪೋಸ್ಟ್ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಈ ಹಿಂದೆ ಅವರು ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ 2019 ರಲ್ಲೂ ರಾಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಕಳೆದಿದ್ದರು.
ಬುಧವಾರದಂದು ಪಿಎಂ ಮೋದಿ ಅವರ ಭೇಟಿಯ ಮೊದಲು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಮುಂದಿರುವ ಪ್ರದೇಶಗಳ ವೈಮಾನಿಕ ವಿಚಕ್ಷಣವನ್ನು ನಡೆಸಿದರು ಮತ್ತು ಜಮ್ಮು ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ವಿವರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH The role played by this brigade during the surgical strike fills everyone with pride. I will remember that day forever as it was decided that all soldiers should return before sunset... I was sitting beside phone & was asking about whereabouts of every soldier...: PM Modi pic.twitter.com/AijhKq7JHn
— ANI (@ANI) November 4, 2021
ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. "ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು" ಎಂದು ಅವರು ಟ್ವಿಟ್ಟರ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಭಾರತವು ಗುರುವಾರ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ. ಇಡೀ ದೇಶವು ಹಬ್ಬದ ಉತ್ಸಾಹದಲ್ಲಿ ಮುಳುಗಿದ್ದರೂ, ವಾಯು ಮಾಲಿನ್ಯದ ಭೀತಿಯ ಕಾರಣ ಭಾರತದ ಕೆಲವು ಭಾಗಗಳಲ್ಲಿ ಪಟಾಕಿಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
Recommended Video