ಪ್ರತ್ಯೇಕತಾವಾದಿ ನಾಯಕ ತೆಹ್ರಿಕ್ ಸಂಘಟನೆ ಮುಖಂಡ ಬಂಧನ
ಶ್ರೀನಗರ, ಜುಲೈ 12: ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಮತ್ತು ತೆಹ್ರಿಕ್-ಎ-ಹುರಿಯತ್ ಮುಖ್ಯಸ್ಥ ಅಶ್ರಫ್ ಸೆಹ್ರಾಯ್ ಹಾಗೂ ಜಮಾತ್ ಸದಸ್ಯರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.
ಅಶ್ರಫ್ ಸೆಹ್ರಾಯ್ ಹಾಗೂ ನಿಷೇಧಿತ ಜಮಾತ್ ಇ ಇಸ್ಲಾಮಿ ಸದಸ್ಯರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ ಬಾಗ್ ಸಿಂಗ್ ಹೇಳಿದ್ದಾರೆ.
ಹುರಿಯತ್ ತೊರೆದ ಪ್ರತ್ಯೇಕತಾವಾದಿ ಮುಖಂಡ ಗಿಲಾನಿ
ಇತ್ತೀಚೆಗೆ ಪ್ರತ್ಯೇಕವಾದಿ ಸೈಯದ್ ಅಲಿ ಶಾ ಗಿಲಾನಿ ಸಂಘಟನೆಯಿಂದ ದೂರ ಉಳಿದ ಬಳಿಕ ಪಾಕಿಸ್ತಾನ ಪರ ತೆಹ್ರಿಕ್ ಎ ಹುರಿಯತ್ ಮುಂಚೂಣಿಗೆ ಬಂದಿತ್ತು. ಹುರಿಯತ್ ಸಮಾವೇಶದ ನಡೆಸಿ ಎಲ್ಲಾ 26 ಪ್ರತ್ಯೇಕ ಸಂಘಟನೆಗಳನ್ನು ಒಗ್ಗೂಡಿಸಲು ಮುಂದಾದ ಸುದ್ದಿ ಬಂದಿತ್ತು. ಕಾಶ್ಮೀರ ಹುತಾತ್ಮರ ದಿನಕ್ಕೆ (ಶುಹಾದಾ-ಎ-ಕಾಶ್ಮೀರ) ಒಂದು ದಿನ ಮೊದಲು ಈ ಘಟನೆ ನಡೆದಿದೆ.
ಶ್ರೀನಗರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಅಶ್ರಫ್ ಸೆಹ್ರಾಯ್ ಅವರ ಪುತ್ರ ಜುನೈದ್ ಸೆಹ್ರಾಯ್ ಸಾವನ್ನಪ್ಪಿದ್ದ. ಹಿಜ್ಬುಲ್ ಮುಜಾಹಿದ್ದೀನ್ನ ವಿಭಾಗೀಯ ಕಮಾಂಡರ್ ಆಗಿದ್ದ ಜುನೈದ್ ನನ್ನು ನವಾಕಡಲ್ ಪ್ರದೇಶದಲ್ಲಿ ಮೇ ತಿಂಗಳಿನಲ್ಲಿ ಹೊಡೆದುರುಳಿಸಲಾಗಿತ್ತು ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಒಂದು ವಿವಾದಿತ ಪ್ರದೇಶ ಮತ್ತು ಅದರ ಮೇಲೆ ಭಾರತದ ನಿಯಂತ್ರಣ ಸಮರ್ಥನೀಯವಲ್ಲ. ಅದು ಕಾಶ್ಮೀರವು ವಿಭಜನೆಯ ಮುಗಿಯದ ಕಾರ್ಯಸೂಚಿ ಎಂದು ಮತ್ತು ಜಮ್ಮು ಹಾಗೂ ಕಾಶ್ಮೀರದ ಜನರ ಆಕಾಂಕ್ಷೆಗಳ ಪ್ರಕಾರ ಅದನ್ನು ಬಗೆಹರಿಸಬೇಕು ಎಂಬ ಪಾಕಿಸ್ತಾನದ ಹಕ್ಕನ್ನು ಹುರಿಯತ್ ಪ್ರತಿಪಾದಿಸುತ್ತಾ ಬಂದಿದೆ. ಮಿರಾವಾಜ್ ಬಿಟ್ಟರೆ ಮಿಕ್ಕ ನಾಯಕರು ಹಿಂಸಾಚಾರ ಮಾರ್ಗವನ್ನು ಹಿಡಿದಿದ್ದಾರೆ.