ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ?
ಶ್ರೀನಗರ್, ಜೂನ್ 28: ಭಾರತೀಯ ವಾಯುಸೇನೆ ನಿಯಂತ್ರಣದ ನಡುವೆಯೂ ಜಮ್ಮು ವಿಮಾನ ನಿಲ್ದಾಣದೊಳಗೆ ಡ್ರೋನ್ ನುಗ್ಗಿಸಿ ದಾಳಿ ನಡೆಸಲಾಗಿದೆ ಎಂದರೆ ಆ ಭದ್ರತಾ ವ್ಯವಸ್ಥೆ ಎಷ್ಟರ ಮಟ್ಟಿಗೆ ದುರ್ಬಲವಾಗಿದೆ ಎಂದು ಭದ್ರತಾ ತಜ್ಞರು ಪ್ರಶ್ನೆ ಮಾಡಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವುದಕ್ಕೆ ಮತ್ತು ತಲುಪಿಸುವುದಕ್ಕೆ ಡ್ರೋನ್ ಬಳಸಲಾಗುತ್ತಿದೆ ಎಂಬ ಅಂಶವು ಕೆಲವು ಸಂದರ್ಭದಲ್ಲಿ ಕಳವಳಕಾರಿಯಾಗಿದೆ. ಆದರೆ ಕಳೆ ವರ್ಷವೇ ಪಾಕಿಸ್ತಾನವು ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳ ಸಾಗಾಟಕ್ಕೆ ಡ್ರೋನ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!?
ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟವು ಭಾರತೀಯ ಭದ್ರತೆಗೊಂದು ಸವಾಲು ಎನ್ನುವಂತಿದೆ. ಸರ್ಕಾರದ ಭದ್ರತಾ ನಿಯೋಜನೆಯನ್ನೇ ಅದು ಪ್ರಶ್ನೆ ಮಾಡುವ ಮಟ್ಟಿಗಿದೆ. "ಡ್ರೋನ್ ಮೂಲಕ ಸ್ಫೋಟಕವನ್ನು ಭಾರತೀಯ ವಾಯುನೆಲೆ ನಿಯಂತ್ರಣದ ವಿಮಾನ ನಿಲ್ದಾಣದಲ್ಲಿ ಹಾಕಲಾಗುತ್ತದೆ ಎಂದರೆ ನಮ್ಮ ಭದ್ರತಾ ವ್ಯವಸ್ಥೆ ಬಗ್ಗೆ ಮರುಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ," ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ ಹೇಳಿದ್ದಾರೆ.
"ಶತ್ರುವಿನ ಸಾಮರ್ಥ್ಯ ಅರಿಯದಿದ್ದರೆ ಅಪಾಯ ನಿಶ್ಚಿತ"
ನಮ್ಮಲ್ಲಿ ಕೆಲವು ಅಧಿಕಾರಿಗಳು ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಲಕ್ಷ್ಯವನ್ನು ವಹಿಸುತ್ತಾರೆ. ಇದರ ಜೊತೆಗೆ ಶತ್ರುಗಳ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಪಾಯ ಆಗಬಹುದು. ಒಂದು ವೇಳೆ ನಮ್ಮದೇ ವ್ಯಾಪ್ತಿಯ ಪ್ರದೇಶದಲ್ಲಿ ಶತ್ರು ತನ್ನ ಶಸ್ತ್ರಾಸ್ತ್ರ ಮತ್ತು ತನ್ನ ಲೋಡ್ ಅನ್ನು ನುಗ್ಗಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ ಎಂದರೆ, ಅದಕ್ಕಿಂತ ಅಪಾಯಕಾರಿ ಬೆಳವಣಿಗೆ ಮತ್ತೊಂದಿಲ್ಲ. ಏಕೆಂದರೆ ಭವಿಷ್ಯದಲ್ಲಿ ಎಲ್ಲೋ ಕುಳಿತು ಈ ರೀತಿಯ ದಾಳಿಗಳನ್ನು ನಡೆಸುವ ಸಾಧ್ಯತೆಗಳಿರುತ್ತವೆ," ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಹೂಡಾ ಎಚ್ಚರಿಕೆ ನೀಡಿದ್ದಾರೆ.
ಚಿತ್ರಕೃಪೆ: Wikipedia
"ಜಮ್ಮು ವಾಯು ನೆಲೆಯಲ್ಲಿ ಭದ್ರತೆಯ ದೌರ್ಬಲ್ಯ"
"ಡ್ರೋನ್ ದಾಳಿಯಿಂದ ಭದ್ರತಾ ಪಡೆ ಮತ್ತು ಸರ್ಕಾರದ ಸಿಬ್ಬಂದಿ ನಿಯೋಜನೆ ವ್ಯವಸ್ಥೆಯಲ್ಲಿನ ವೈಫಲ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ," ಎಂದು ನಿವೃತ್ತ ಬ್ರಿಗೇಡಿಯರ್ ಅನಿಲ್ ಗುಪ್ತಾ ಹೇಳಿದ್ದಾರೆ. "ಒಂದು ವೇಳೆ ಡ್ರೋನ್ ನಲ್ಲಿ ಜಿಪಿಎಸ್ ಅಳವಡಿಸಿದ್ದು ಅದನ್ನು ಹೊಡೆದುರುಳಿಸಿದ್ದರೆ, ಆಗ ಭದ್ರತಾ ಸಿಬ್ಬಂದಿಯು ಆ ಡ್ರೋನ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಅಥವಾ ಆ ಡ್ರೋನ್ ಸ್ವಯಂ ವಿನಾಶಕಾರಿ ಆಗಿದ್ದರೆ, ಅದರ ಮೂಲವನ್ನು ಕಂಡು ಹಿಡಿಯುವುದು ಕಷ್ಟಕರವಾಗುತ್ತದೆ. ಇದೆರೆಡ ಹೊರತಾಗಿ ಡ್ರೋನ್ ತಾನು ಹೊತ್ತುಕಂಡ ಸ್ಫೋಟಕವನ್ನು ಇಲ್ಲಿ ಎಸೆದು ವಾಪಸ್ ಹೋಗಿದ್ದರೆ, ಆಗ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ," ಎಂದು ಅನಿಲ್ ಗುಪ್ತಾ ಹೇಳಿದ್ದಾರೆ.
ಚಿತ್ರಕೃಪೆ: Twitter
ಸ್ಫೋಟದ ಹಿಂದಿನ ವೈಫಲ್ಯದ ಬಗ್ಗೆ ಅನಿಲ್ ಗುಪ್ತಾ ಉಲ್ಲೇಖ
ಭದ್ರತಾ ಉಪಕರಣಗಳ ಬಗ್ಗೆ ಉಲ್ಲೇಖಿಸಿರುವ ನಿವೃತ್ತ ಬ್ರಿಗೇಡಿಯರ್ ಅನಿಲ್ ಗುಪ್ತಾ, "ಅದು ಕತ್ತಲ ರಾತ್ರಿ.. ಅತಿಹೆಚ್ಚು ಭದ್ರತೆಯಿರುವ ವಲಯದಲ್ಲಿ ರಾಡರ್(ಕಣ್ಗಾವಲು ಉಪಕರಣ)ಗಳ ಲಭ್ಯತೆಯೂ ಇದೆ. ಅದಾಗ್ಯೂ, ನಡೆದಿರುವ ಘಟನೆಯು ಕಣ್ಗಾವಲು ವೈಫಲ್ಯಕ್ಕೆ ಸಾಕ್ಷಿಯಾಗುತ್ತದೆ. ಗಡಿಯಲ್ಲಿರುವ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ, ದೇಶದೊಳಗಿರುವ ಭದ್ರತಾ ಸಿಬ್ಬಂದಿ ಅದನ್ನು ಏಕೆ ಗುರುತಿಸುವುದಕ್ಕೆ ಸಾಧ್ಯವಾಗಲಿಲ್ಲ?, ಭಾರತೀಯ ವಾಯುನೆಲೆ ತಪಾಸಣೆ ಕೇಂದ್ರದಲ್ಲಿ ಇರುವ ಐಎಎಫ್ ಸಿಬ್ಬಂದಿಯು ಅದನ್ನು ಏಕೆ ಪತ್ತೆ ಮಾಡಲಿಲ್ಲ ಹಾಗೂ ಹೊಡೆದುರುಳಿಸಲು ಆಗಲಿಲ್ಲ," ಎಂದು ಪ್ರಶ್ನೆ ಮಾಡಿದ್ದಾರೆ.
ಪಾಕಿಸ್ತಾನದ ಡ್ರೋನ್ಗಳನ್ನು ಬಳಸಿದರಾ ಉಗ್ರರು?
"ಭಾರತದಲ್ಲಿ ಗಡಿ ನುಸುಳುವ ಉಗ್ರರು ಪಾಕಿಸ್ತಾನದಿಂದ ಡ್ರೋನ್ಗಳನ್ನು ಪಡೆದುಕೊಂಡು ಅದನ್ನು ಭಾರತೀಯ ವಾಯುನೆಲೆಯ ಮೇಲೆ ಪ್ರಯೋಗಿಸಿರುವ ಸಾಧ್ಯತೆಯೂ ಇದೆ. ಅದು ಹಾಗಾಗಿದ್ದರೆ ಅದಕ್ಕಿಂತ ಹೆಚ್ಚಿನ ಅಪಾಯ ಮತ್ತೊಂದಿಲ್ಲ," ಎಂದು ನಿವೃತ್ತ ಬ್ರಿಗೇಡಿಯರ್ ಅನಿಲ್ ಗುಪ್ತಾ ಹೇಳಿದ್ದಾರೆ. "ಡ್ರೋನ್ ದಾಳಿಯಿಂದ ಸೇನಾ ನೆಲೆಗಳನ್ನು ರಕ್ಷಿಸುವುದು ತುಂಬಾ ಕಷ್ಟಕರವಾಗಿರುತ್ತವೆ. ಡ್ರೋನ್ಗಳನ್ನು ಪತ್ತೆಹಚ್ಚಲು ಮತ್ತು ಪ್ರತಿದಾಳಿ ನಡೆಸುವುದಕ್ಕೆ ಅಗತ್ಯವಿರುವ ತಾಂತ್ರಿಕ ಸಲಕರಣೆಗಳನ್ನು ಹೊಂದಬೇಕಿದೆ, ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಹೂಡಾ ಹೇಳಿದ್ದಾರೆ.
ಐಎಎಫ್ ವಾಯುನೆಲೆಯಲ್ಲಿ ಸ್ಫೋಟದ ಹಿನ್ನೆಲೆ
ಜೂನ್ 27ರ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿದೆ. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.
"ಭಾರತೀಯ ವಾಯು ನೆಲೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡು ಲಘುಸ್ಫೋಟವು ಉಗ್ರರ ದಾಳಿಯಾಗಿದೆ," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಸಿದ್ದರು. ಮೊದಲ ಬಾರಿಗೆ ಉಗ್ರರ ದಾಳಿಗೆ ಡ್ರೋನ್ ಬಳಕೆ ಆಗಿರುವುದು ಗೊತ್ತಾಗಿದ್ದು, ಈ ಡ್ರೋನ್ ದಾಳಿ ಹಿಂದೆ ಪಾಕಿಸ್ತಾನ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.