ಉಗ್ರರಿಗೆ ಹಣ: ಕಾಶ್ಮೀರದಲ್ಲಿ ಎನ್ ಜಿಓ ಸಂಸ್ಥೆಗಳ ಮೇಲೆ ಎನ್ಐಎ ದಾಳಿ
ಶ್ರೀನಗರ್, ಅಕ್ಟೋಬರ್.29: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆಳನ್ನು ನಡೆಸುವುದಕ್ಕೆ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಸರ್ಕಾರೇತರ ಸಂಸ್ಥೆಗಳು ಮತ್ತು ಟ್ರಸ್ಟ್ ಗಳ ಮೇಲೆ ರಾಷ್ಟ್ರೀಯ ತನಿಖಾ ತಂಡವು ಎರಡನೇ ದಿನವೂ ದಾಳಿ ಮುಂದುವರಿಸಿದೆ.
ಗುರುವಾರ ಶ್ರೀನಗರದ 9 ಮತ್ತು ನವದೆಹಲಿ 6 ಕಡೆಗಳಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತು ಟ್ರಸ್ಟ್ ಗಳ ಮೇಲೆ ಎನ್ಐಎ ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ನವದೆಹಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಜಾಫರ್ ಉಲ್ ಇಸ್ಲಾಂ ಖಾನ್ ಮನೆ ಮೇಲೂ ದಾಳಿ ನಡೆಸಲಾಗಿದೆ.
ಉಗ್ರ ಸಂಘಟನೆಗಳಿಗೆ ನೆರವು: ಶ್ರೀನಗರದಲ್ಲಿ 9 ಕಡೆ ಎನ್ಐಎ ದಾಳಿ
ಬುಧವಾರವಷ್ಟೇ ಶ್ರೀನಗರ ಮತ್ತು ಬಂಡಿಪೋರಾದ 10 ಕಡೆ ಹಾಗೂ ಬೆಂಗಳೂರಿನ ಒಂದ ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. 2000ರಲ್ಲೇ ಸ್ಥಾಪಿಸಲಾದ ಕನಿಷ್ಠ ಮೂರು ಸರ್ಕಾರೇತರ ಸಂಸ್ಥೆಗಳ ಮೇಲೆಯೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.
ವಿದೇಶದ ಹಣ ಭಯೋತ್ಪಾದನೆಗೆ ವಿನಿಯೋಗ:
ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ, ಧಾರ್ಮಿಕ ಕಾರ್ಯಗಳು ಮತ್ತು ಇತರ ಸಾಮಾಜಿಕ ಕಾರ್ಯಗಳ ಹೆಸರಿನಲ್ಲಿ ವಿದೇಶಗಳಿಂದ ಹಣವನ್ನು ಸಂಗ್ರಹಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಅದನ್ನು ವಿನಿಯೋಗಿಸಲಾಗುತ್ತಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆ ಶ್ರೀನಗರದಲ್ಲಿ ಸ್ಥಳೀಯ ಪೊಲೀಸ್ ಮತ್ತು ಅರೆ ಸೇನಾಪಡೆಯ ನೆರವಿನೊಂದಿಗೆ ಬುಧವಾರ ಬೆಳಗ್ಗೆ ಶೋಧಕಾರ್ಯ ನಡೆಸಲಾಗಿದೆ.
ಶ್ರೀನಗರದ ಪ್ರಮುಖ ಇಂಗ್ಲಿಷ್ ಪತ್ರಿಕೆ ಆವರಣದಲ್ಲಿನ ಟ್ರಸ್ಟ್ನ ಕಚೇರಿಯಲ್ಲಿ ಶೋಧ ಕಾರ್ಯಚರಣೆ ನಡೆಸಲಾಯಿತು. ಪತ್ರಕರ್ತ ಪರ್ವೈಜ್ ಬುಖಾರಿ ಮತ್ತು ಗೌಹರ್ ಗಿಲಾನಿ ನಿವಾಸದ ಮೇಲೂ ಎನ್ಐಎ ದಾಳಿ ನಡೆಸಿತ್ತು. ಇದರ ಜೊತೆಗೆ ಕಾಶ್ಮೀರದಲ್ಲಿ ಎನ್ಜಿಒ ನಡೆಸುತ್ತಿರುವ ಖುರಾಮ್ ಪರ್ವೇಜ್ ಎಂಬಾತನ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ.