ಈದ್ ಗೂ ಮುನ್ನ ಸಂಜೋತಾ ರದ್ದು, ಗಡಿಯಲ್ಲಿ ಏನೇನೋ ಬೆಳವಣಿಗೆಯ ಸದ್ದು!
ಶ್ರೀನಗರ, ಆಗಸ್ಟ್ 08: ಪಾಕಿಸ್ತಾನವು ಸಂಜೋತಾ ರೈಲು ಸೇವೆಯನ್ನು ಶಾಶ್ವತವಾಗಿ ರದ್ದುಗೊಳಿಸಿರುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸುತ್ತಿದ್ದಂತೆಯೇ ಗಡಿಯಲ್ಲಿ ಏನೇನೋ ಬೆಳವಣಿಗೆಯ ಸದ್ದು ಆರಭವಾಗಿದೆ!
ಕೂಡಲೇ ಭಾರತ ಇಂಜಿನ್ ಅನ್ನು ಕಳಿಸಿ, ಸಂಜೋತಾ ಬೋಗಿಯನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. ಗುರುವಾರ ಭಾರತ ತಲುಪಬೇಕಾಗಿದ್ದ ರೈಲು ವಾಘಾ ಗಡಿಯಲ್ಲೇ ನಿಂತಿದ್ದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಸಂಜೋತಾ ಎಕ್ಸ್ ಪ್ರೆಸ್ ಸೇವೆ ಶಾಶ್ವತವಾಗಿ ರದ್ದು! ಯುದ್ಧದ ಮುನ್ಸೂಚನೆಯೇ?
ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಿಗುಡಾಯಿಸಿದ್ದು, ಬುಧವಾರವಷ್ಟೇ ಭಾರತೀಯ ರಾಯಭಾರಿಯನ್ನು ಪಾಕಿಸ್ತಾನ್ ವಾಪಸ್ ಕಳಿಸಿತ್ತು. ಇದೀಗ ಸಂಜೋತಾ ರೈಲು ಸೇವೆಗೆ ತಡೆ ಒಡ್ಡಿರುವುದಲ್ಲದೆ, ಈ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸುವುದಾಗಿ ಪಾಕ್ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.(ಚಿತ್ರಗಳು: ಎಎನ್ ಐ ಕೃಪೆ)
ವಾಘಾಕ್ಕೆ ತೆರಳಲಿರುವ ಭಾರತೀಯ ಸಿಬ್ಬಂದಿ
ಪಾಕಿಸ್ತಾನದ ವೀಸಾ ಹೊಂದಿರುವ ಭಾರತೀಯ ರೈಲು ಚಾಲಕರನ್ನು ಮತ್ತು ಸಿಬ್ಬಂದಿಯನ್ನು ನಾವು ಇಂಜಿನ್ ನೊಂದಿಗೆ ವಾಘಾ ಗಡಿಗೆ ಕಳಿಸುತ್ತಿದ್ದೇವೆ. ಅವರು ಸಂಜೋತಾ ರೈಲಿನ ಬೋಗಿಗಳನ್ನು ವಾಪಸ್ ಕರೆತರುತ್ತಾರೆ ಎಂದು ಅಟ್ಟಾರಿ ಗಡಿಯ ರೈಲ್ವೇ ನಿಲ್ದಾಣದ ಮೇಲ್ವಿಚಾರಕರಾದ ಅರವಿಂದ್ ಕುಮಾರ್ ಗುಪ್ತ ಹೇಳಿದ್ದಾರೆ.
ಗಡಿಯಲ್ಲೇ ರೈಲು ತಡೆದ ಪಾಕ್
ಲಾಹೋರ್ ನಿಂದ ಭಾರತದ ಅಮೃತಸರದತ್ತ ಪ್ರಯಾಣ ಬೆಳೆಸಿದ್ದ ಸಂಜೋತಾ ರೈಲವನ್ನು ವಾಘಾ ಗಡಿಯಲ್ಲೇ ತಡೆದ ಪಾಕಿಸ್ತಾನ, ರೈಲಿನಲ್ಲಿದ್ದ ಪಾಕಿಸ್ತಾನದ ಚಾಲಕ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಭಾರತಕ್ಕೆ ಕಳಿಸುವುದಿಲ್ಲ, ಭಾರತೀಯ ಪ್ರಯಾಣಿಕರಿರುವ ಬೋಗಿಯನ್ನು ಭಾರತವೇ ಬಂದು ವಾಪಾಸ್ ಕೊಂಡೊಯ್ಯಬೇಕು ಎಂದು ಪಾಕಿಸ್ತಾನ ತಾಕೀತು ಹಾಕಿದ ಹಿನ್ನೆಲೆಯಲ್ಲಿ ಭಾರತ ತನ್ನ ಸಿಬ್ಬಂದಿಯನ್ನು ವಾಘಾ ಗಡಿ ಕಳಿಸುತ್ತಿದೆ.
ಈದ್ ಪ್ರಯುಕ್ತ ಪ್ರಯಾಣ
ಸಂಜೋತಾ ರೈಲು ವಾರಕ್ಕೆ ಎರಡು ಬಾರಿ ಮಾತ್ರವೇ ಭಾರತ ಮತ್ತು ಪಾಕಿಸ್ತಾನದ ನಡುವೆ ಚಲಿಸುತ್ತದೆ. ಭಾರತದ ಅಟ್ಟಾರಿ ಮತ್ತು ಪಾಕ್ ನ ವಾಘಾ ಗಡಿಯ ಮೂಲಕ ಚಲಿಸುವ ಈ ರೈಲಿನಲ್ಲಿ ಸೋಮವಾರ ನಡೆಯಲಿರುವ ಈದ್ ಹಬ್ಬದ ಕಾರಣ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. ಅದು ಗುರುವಾರ ಭಾರತವನ್ನು ತಲುಪಬೇಕಿತ್ತು.
ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ
ಜಮಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಭಾರತ ಘೋಷಿಸಿದೆ. ಇದರಿಂದಾಗಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಭಾರತ ಸುರಕ್ಷತೆಯ ದೃಷ್ಟಿಯಿಂದ ಈಗಾಗಲೇ ಹೆಚ್ಚಿನ ಸೈನಿಕರನ್ನು ಗಡಿಯಲ್ಲಿ ಜಮಾವಣೆ ಮಾಡಿದೆ. ಮಾಹಿತಿಯ ಪ್ರಕಾರ ಪಾಕಿಸ್ತಾನವೂ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಜಮಾವಣೆ ಮಾಡಿದೆ.