ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಲು ಕೇಂದ್ರ ತೀರ್ಮಾನ?
ಶ್ರೀನಗರ, ಆಗಸ್ಟ್ 2: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿರುವುದು ವಿವಿಧ ಊಹಾಪೋಹಗಳನ್ನು ಹುಟ್ಟುಹಾಕುತ್ತಿದೆ. ಕಣಿವೆ ರಾಜ್ಯದಲ್ಲಿರುವ ವಿಶೇಷ 35ಎ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಅಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಭೆಗಳು ನಡೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸುತ್ತಿದೆ ಎನ್ನಲಾಗಿತ್ತು.
ಈ ನಡುವೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಅಮರನಾಥ ಯಾತ್ರಾರ್ಥಿಗಳನ್ನು ಗುರಿಯನ್ನಾಗಿರಿಸಿ ಭಯೋತ್ಪಾದನಾ ದಾಳಿಗಳು ನಡೆಯುವ ಬೆದರಿಕೆ ಕುರಿತು ಇತ್ತೀಚಿನ ಗುಪ್ತಚರ ವರದಿಗಳನ್ನು ಆಧರಿಸಿ ಭದ್ರತಾ ಕಾರಣದಿಂದ ಯಾತ್ರೆಯನ್ನು ಮೊಟಕುಗೊಳಿಸುವಂತೆ ಭಕ್ತರಿಗೆ ಸೂಚನೆ ನೀಡಿದೆ. ಎಲ್ಲ ಪ್ರವಾಸಿಗರು ಮತ್ತು ಅಮರನಾಥ ಯಾತ್ರಾರ್ಥಿಗಳು ಕಣಿವೆ ರಾಜ್ಯದಲ್ಲಿನ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ರಾಜ್ಯದಿಂದ ಹೊರ ಹೋಗಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ಹೊರಡಿಸಿದೆ.
ಉಗ್ರದಾಳಿಯ ಭೀತಿ: ಅಮರನಾಥ್ ಯಾತ್ರಿಕರಿಗೆ ಹಿಂದಿರುಗುವಂತೆ ಸೂಚನೆ
ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ರಾಜ್ಯ ತೊರೆಯುವಂತೆ ಸೂಚನೆ ನೀಡಲಾಗಿದೆ. ಆದರೆ, ಸ್ಥಳೀಯ ನಿವಾಸಿಗಳಿಗೆ ಯಾವುದೇ ಸೂಚನೆ ಅಥವಾ ಎಚ್ಚರಿಕೆ ನೀಡಿಲ್ಲ. ಅವರ ಭದ್ರತೆ ವಿಚಾರವಾಗಿ ಕೇಂದ್ರ ಸರ್ಕಾರ ಪ್ರಕಟಣೆ ನೀಡಿಲ್ಲ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ. ಕಣಿವೆ ರಾಜ್ಯವನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಲು ಕೇಂದ್ರ ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ.
ಅನುಮಾನ ಹುಟ್ಟಿಸಿದ ಕೇಂದ್ರದ ನಡೆ
ಗೃಹ ಸಚಿವಾಲಯ ಹೊರಡಿಸಿರುವ ಸೂಚನೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಭದ್ರತಾ ಸೂಚನೆಯನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯದಲ್ಲಿ ಏನೋ ಮಹತ್ವದ ಕಾರ್ಯಕ್ಕೆ ಕೈಹಾಕಿದೆ ಎಂಬ ಚರ್ಚೆ ನಡೆಯುತ್ತಿದೆ. ಕಣಿವೆ ರಾಜ್ಯದ ಆಡಳಿತದಲ್ಲಿನ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅದರ ಭೌಗೋಳಿಕ ನಕ್ಷೆಯ ವಿನ್ಯಾಸವನ್ನು ಬದಲಿಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಸತತವಾಗಿ ಈ ಭಾಗದಲ್ಲಿ ಸೇನಾ ತುಕಡಿಗಳ ಸಂಖ್ಯೆ ಹೆಚ್ಚಿಸುತ್ತಿರುವುದು ಅನುಮಾನ ಬಲಗೊಳ್ಳುವಂತೆ ಮಾಡಿದೆ. ಇದು ಸತ್ಯವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಲಿದೆ.
ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ?
ಪ್ರತ್ಯೇಕ ಜಮ್ಮು ರಾಜ್ಯ?
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಮ್ಮು ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವ ಮೂಲಕ ಕಾಶ್ಮೀರ ಕಣಿವೆ ಪ್ರದೇಶದಿಂದ ವಿಭಜಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಗಳನ್ನು ನಿಯಂತ್ರಿಸಲು, ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಅದರ ವಿಭಜನೆಗೆ ಕೇಂದ್ರ ಉದ್ದೇಶಿಸಿದೆ ಎಂದು ಹೇಳಲಾಗಿದೆ.
ಕೇಂದ್ರಾಡಳಿತ ಪ್ರದೇಶಗಳು
ಹಾಗೆ ಕಾಶ್ಮೀರ ಕಣಿವೆ ಭಾಗದಿಂದ ಜಮ್ಮುವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ ಬಳಿಕ ಕಾಶ್ಮೀರವನ್ನು ಕೂಡ ಮತ್ತೊಂದು ರಾಜ್ಯವನ್ನಾಗಿ ರಚಿಸಲು ಕೇಂದ್ರ ಮುಂದಾಗುತ್ತಿಲ್ಲ. ಬದಲಾಗಿ ಕಾಶ್ಮೀರ ಮತ್ತು ಲಡಾಕ್ಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಲು ಉದ್ದೇಶಿಸಿದೆ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳನ್ನು ದೆಹಲಿ ಮೂಲದ ಗವರ್ನರ್ ನಿಯಂತ್ರಿಸಲಿದ್ದಾರೆ. ಇಲ್ಲಿ ರಾಜಕೀಯ ಪಕ್ಷಗಳು ಇರುವುದಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಮ್ಮು ಕಾಶ್ಮೀರದಲ್ಲಿ ಒಂದೇ ವಾರದಲ್ಲಿ ಮತ್ತೆ 28 ಸಾವಿರ ಸೈನಿಕರ ನಿಯೋಜನೆ
ಕಾಶ್ಮೀರದಲ್ಲಿ ದ್ವಜಾರೋಹಣ
ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸುತ್ತಾರೆ. ಆದರೆ, ಈ ಬಾರಿ ಮೋದಿ ಅವರು ಸಂಪ್ರದಾಯವನ್ನು ಮುರಿದು ಕಾಶ್ಮೀರದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.
35ಎ ಮತ್ತು 370 ವಿಧಿಗಳ ರದ್ದು?
ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 280 ಭದ್ರತಾ ತುಕಡಿಗಳನ್ನು ನಿಯೋಜಿಸಲಾಗಿದೆ. ಅಂದರೆ ಸುಮಾರು 28,000 ಹೆಚ್ಚುವರಿ ಸೈನಿಕರು ಕಣಿವೆ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಸರ್ಕಾರ ಏಕಾಏಕಿ ಈ ರೀತಿ ತುಕಡಿಗಳನ್ನು ನಿಯೋಜಿಸಿರುವುದು ಅದು ತನ್ನ ಪ್ರಣಾಳಿಕೆಗಳಲ್ಲಿ ಹೇಳಿಕೊಂಡು ಬಂದಿದ್ದ ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ 35ಎ ಮತ್ತು 370 ವಿಧಿಗಳನ್ನು ರದ್ದುಗೊಳಿಸುವ ಘೋಷಣೆಯನ್ನು ಜಾರಿಗೆ ತರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸೇನಾ ನಿಯೋಜನೆ ಬಗ್ಗೆ ಅಲ್ಲಿನ ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಅಗತ್ಯವಿಲ್ಲ. ಇದು ರಾಜಕೀಯ ಸಮಸ್ಯೆ. ಇದನ್ನು ಸೇನೆಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವು ಜನರಲ್ಲಿ ಭೀತಿ ಮೂಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.