ಬಂದ ದಾರಿಗೆ ಸುಂಕವಿಲ್ಲ: ರಾಹುಲ್ ಗಾಂಧಿ ನಿಯೋಗ ಕಾಶ್ಮೀರ ಏರ್ಪೋರ್ಟ್ನಿಂದ ವಾಪಸ್
ಶ್ರೀನಗರ, ಆಗಸ್ಟ್ 24: ಬಂದ ದಾರಿಗೆ ಸುಂಕವಿಲ್ಲ ಎಂದು ರಾಹುಲ್ ಗಾಂಧಿ ನಿಯೋಗ ಜಮ್ಮು ಕಾಶ್ಮೀರದ ಏರ್ಪೋರ್ಟ್ನಿಂದಲೇ ವಾಪಸ್ ತೆರಳಿದೆ.
ರಾಹುಲ್ ಗಾಂಧಿ ಜೊತೆಗೆ ಒಟ್ಟು 11 ಕಾಂಗ್ರೆಸ್ ಮುಖಂಡರ ನಿಯೋಗವು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಪ್ರಸ್ತುತ ಸ್ಥಿತಿ ಬಗ್ಗೆ ಚರ್ಚಿಸಲು ಕಾಶ್ಮೀರಕ್ಕೆ ಬಂದಿತ್ತು. ಆದರೆ ಬರುವ ಮೊದಲೇ ಕಾಶ್ಮೀರ ಸರ್ಕಾರ ಅವರಿಗೆ ಬರದಂತೆ ಮನವಿ ಮಾಡಿತ್ತು.
ಕಾಶ್ಮೀರಕ್ಕೆ ಬರಬೇಡಿ: ರಾಹುಲ್ ಗಾಂಧಿಗೆ ಮನವಿ
ಆದರೂ ಅವರ ಮಾತು ಲೆಕ್ಕಿಸದೆ ರಾಹುಲ್ ನಿಯೋಗ ಕಾಶ್ಮೀರಕ್ಕೆ ಬಂದಿತ್ತು. ಆದರೆ ಕಾಶ್ಮೀರ ಏರ್ಪೋರ್ಟಿನಿಂದ ಅವರಿಗೆ ಹೊರಗೆ ಹೋಗಲು ಅವಕಾಶ ನೀಡದ ಕಾರಣ ವಾಪಸ್ ತೆರಳಿದ್ದಾರೆ.
ನಿಯೋಗದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ, ಆರ್ಜೆಡಿಯ ಮನೋಜ್ ಝಾ, ಎನ್ಸಿಪಿಯ ದಿನೇಶ್ ತ್ರಿವೇದಿ, ಡಿಎಂಕೆಯ ತಿರುಚ್ಚಿ ಶಿವ ಇದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಅಸಿಂಧುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಅಶಾಂತಿ ತಲೆದೋರಿದ್ದು, ಸಾವು-ನೋವುಗಳಾಗುತ್ತಿವೆ ಎಂದು ಈ ಹಿಂದೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸಂಬಂಧ ಆಗಸ್ಟ್ 11ರಂದು ಪ್ರತಿಕ್ರಿಯೆ ನೀಡಿದ್ದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ನಿಮಗೆ ನಾವೇ ವಿಶೇಷ ವಿಮಾನ ಕಳಿಸಿಕೊಡುತ್ತೇನೆ. ನೀವು ಒಮ್ಮೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ, ಇಲ್ಲಿನ ವಾಸ್ತವವನ್ನು ಗಮನಿಸಿ, ಪ್ರತಿಕ್ರಿಯಿಸಿ, ಆಗ ನೀವು ಜವಾಬ್ದಾರಿಯುತ ವ್ಯಕ್ತಿಯಾಗುವಿರಿ ಎಂದು ಕಣಿವೆ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
ರಾಜ್ಯಪಾಲರ ಆಹ್ವಾನವನ್ನು ಒಪ್ಪಿಕೊಂಡ ರಾಹುಲ್ ಗಾಂಧಿ, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಅದರಂತೆ ಇದೀಗ ವಿರೋಧ ಪಕ್ಷಗಳ ನಾಯಕರ ನಿಯೋಗದೊಂದಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರು.