350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 14: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಉಗ್ರಗಾಮಿಗಳು ಸಿಅರ್ ಪಿಎಫ್ ಸಿಬ್ಬಂದಿ ಇದ್ದ ಬಸ್ ಗೆ 350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋ ಎಸ್ ಯುವಿಯಲ್ಲಿ ತಂದು ಗುದ್ದಿಸಲಾಗಿದೆ. ಇದು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಘಟನೆ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಉಗ್ರ ದಾಳಿ ಇದಾಗಿದೆ. ಕನಿಷ್ಠ 30 ಮಂದಿ ಹುತಾತ್ಮರಾಗಿ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವಂತಿಪುರದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಭದ್ರತೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಎರಡು ಸಾವಿರದೈನೂರರಷ್ಟು ಸೈನಿಕರು ವಿವಿಧ ಬಸ್ ಗಳಲ್ಲಿದ್ದರು.
ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಹವಾಮಾನ ವೈಪರೀತ್ಯದ ಕಾರಣಕ್ಕೆ ಎರಡು ದಿನಗಳಿಂದ ಶ್ರೀನಗರ್- ಜಮ್ಮು ಹೆದ್ದಾರಿ ಮುಚ್ಚಲಾಗಿತ್ತು. ಆದ್ದರಿಂದ ಏಕ ಕಾಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಯೋಧರು ಪ್ರಯಾಣಿಸುತ್ತಿದ್ದರು. ಈ ಸೇನಾ ವಾಹನ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಹೊರಟಿತ್ತು. ಅತ್ಮಹತ್ಯಾ ದಾಳಿಕೋರನು ಬಸ್ಸಿಗೆ ಎದುರಿನಿಂದ ಬಂದು ಗುದ್ದಿಸಿದ್ದಾನೆ. ಆ ಬಸ್ಸಿನಲ್ಲಿ ಮೂವತ್ತೊಂಬತ್ತು ಸಿಬ್ಬಂದಿ ಇದ್ದರು.
ಈ ಭಾರೀ ಸ್ಫೋಟದಿಂದ ಹೆದ್ದಾರಿಯ ನೂರು ಮೀಟರ್ ವ್ಯಾಪ್ತಿಯುದ್ದಕ್ಕೂ ಮೃತರ ದೇಹ ಭಾಗಗಳು, ಅವಶೇಷ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಇದೇ ವೇಳೆ ಇತರ ವಾಹನಗಳಿಗೂ ಹಾನಿಯಾಗಿದೆ. ದಾಳಿ ಹೊಣೆ ಹೊತ್ತಿರುವ ಜೈಶ್-ಇ-ಮೊಹ್ಮದ್ ಶಸ್ತ್ರಸಜ್ಜಿತ ವ್ಯಕ್ತಿಯ ಫೋಟೋ, ವಿಡಿಯೋ ಹಾಕಿದೆ. ಆತನನ್ನು ಅದಿಲ್ ಅಹ್ಮದ್ ದರ್ ಅಥವಾ ವಕಾಸ್ ಕಮ್ಯಾಂಡೋ, ಪುಲ್ವಾಮದ ಕಾಕಪುರದವನು ಎಂದು ಹೇಳಲಾಗಿದೆ. ಆತ ಕಳೆದ ವರ್ಷವಷ್ಟೇ ಜೈಶ್-ಇ-ಮೊಹ್ಮದ್ ಸೆರಿದ್ದ.