ಭದ್ರತಾ ಪಡೆ ಮೇಲಿನ ಉಗ್ರರ ಗ್ರೆನೇಡ್ ದಾಳಿ: ಗುರಿ ತಪ್ಪಿ 12 ನಾಗರಿಕರಿಗೆ ಗಾಯ
ಶ್ರೀನಗರ, ನವೆಂಬರ್ 19: ಭದ್ರತಾ ಪಡೆಗಳನ್ನು ಗುರಿಯನ್ನಾಗಿರಿಸಿಕೊಂಡು ಉಗ್ರರು ನಡೆಸಿದ ಗ್ರೆನೇಡ್ ದಾಳಿಯು ಗುರಿ ತಪ್ಪಿದ್ದರಿಂದ 12 ನಾಗರಿಕರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿನ ಬುಧವಾರ ನಡೆದಿದೆ. ಉಗ್ರರು ಎಸೆದ ಗ್ರೆನೇಡ್ ಗುರಿ ತಪ್ಪಿ ಜನನಿಬಿಡ ರಸ್ತೆಯಲ್ಲಿ ಬಿದ್ದಿದೆ. ಬುಧವಾರ ಸಂಜೆ 5.45ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಎಲ್ಲ ನಾಗರಿಕರನ್ನೂ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಪುಲ್ವಾಮಾ ಪೊಲೀಸರಿಗೆ ಈ ದಾಳಿಯ ಮಾಹಿತಿ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಚೌಕ್ ಕಕಪೊರಾದಲ್ಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 41 ಬೆಟಾಲಿಯನ್ನ ಬಂಕರ್ ಮೇಲೆ ಉಗ್ರರು ಗ್ರೆನೇಡ್ ಒಂದನ್ನು ಎಸೆದಿದ್ದರು.
ಕುಪ್ವಾರದ ಸೇನಾ ಶಿಬಿರದ ಬಳಿ ಹಿಮಪಾತ: ಓರ್ವ ಯೋಧ ಹುತಾತ್ಮ
ಆದರೆ ಬಂಕರ್ಅನ್ನು ಗುರಿಯಾಗಿರಿಸಿದ್ದ ಗ್ರೆನೇಡ್ ತಪ್ಪಿ ಜನ ನಿಬಿಡ ರಸ್ತೆಯಲ್ಲಿ ಬಿದ್ದು ಸ್ಫೋಟಗೊಂಡಿದೆ. ಇದರಿಂದ ಸ್ಥಳದಲ್ಲಿದ್ದ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಭಾರತದ ಪ್ರತೀಕಾರಕ್ಕೆ ಪಾಕಿಸ್ತಾನದ 11 ಸೈನಿಕರ ಸಾವು: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ
ಪುಲ್ವಾಮಾ ಪೊಲೀಸರು ಘಟನೆ ಸಂಬಂಧ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಭಯೋತ್ಪಾದನಾ ದಾಳಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಪುಲ್ವಾಮಾದ ಚೌಕ್ ಕಕಪೊರಾದ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಉಗ್ರರನ್ನು ಪತ್ತೆಹಚ್ಚಿ ಬಂಧಿಸಲು ವ್ಯಾಪಕ ಶೋಧ ಆರಂಭಿಸಲಾಗಿದೆ.