ಪುಲ್ವಾಮಾ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ್, ಜೂನ್.23: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಬೆಳ್ಳಂಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆಯಲ್ಲಿ ಕಣಿವೆ ರಾಜ್ಯದ ಶಾಂತಿ ಕದಡಲು ಮುಂದಾದ ಇಬ್ಬರು ಉಗ್ರರನ್ನು ಭಾರತೀಯ ಸೇನಾ ಯೋಧರು ಹೊಡೆದುರುಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಭಾರತೀಯ ಸೇನೆ ಹಾಗೂ ಚಿನಾರ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಬಳಿಕ ಉಗ್ರರ ಬಳಿಯಿದ್ದ ಎರಡು ಎಕೆ-47 ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆಯಲಾಗಿದೆ.
ಶ್ರೀನಗರದಲ್ಲಿ ಮೂವರು ಉಗ್ರರನ್ನು ಬಲಿ ಹಾಕಿದ ಸೇನೆ
ಪುಲ್ವಾಮಾ ಜಿಲ್ಲೆಯ ಬಂದಜೂ ಪ್ರದೇಶದಲ್ಲಿ ಉಗ್ರರು ಹಾಗೂ ಭಾರತೀಯ ರಕ್ಷಣಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಒಬ್ಬ ಸಿಆರ್ ಪಿಎಫ್ ಯೋಧರಿಗೆ ಗುಂಡೇಟಿನಿಂದ ಗಾಯವಾಗಿದ್ದು, ತಕ್ಷಣ ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಿಆರ್ ಪಿಎಫ್ ಮಾಹಿತಿ ನೀಡಿದೆ.
ಎರಡು ದಿನದ ಹಿಂದೆ ಮೂವರು ಉಗ್ರರ ಹತ್ಯೆ:
ಕಳೆದ ಜೂನ್.21ರಂದಷ್ಟೇ ಝಾದಿಬಾಲ್ ನ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಸಿಅರ್ ಪಿಎಫ್ QAT (Quick Action Team), 115 ಬೆಟಾಲಿಯನ್, 28 ಬೆಟಾಲಿಯನ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಜೂನಿಮಾರ್ ಪೋಂಜ್ವಾಲ್ ಪೊರಾ ಪ್ರದೇಶವನ್ನು ಸುತ್ತುವರೆದು, ಉಗ್ರರು ಕದಲದಂತೆ ಮಾಡಿ, ಉಗ್ರರನ್ನು ಹೊಡೆದುರುಳಿಸಿದ್ದರು.