ಕಾಶ್ಮೀರದಲ್ಲಿ ಪಂಡಿತನ ಹತ್ಯೆ; ರಾತ್ರೋರಾತ್ರಿ ಭುಗಿಲೆದ್ದ ಪ್ರತಿಭಟನೆ
ಶ್ರೀನಗರ್, ಮೇ 13: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಿನ್ನೆ ಗುರುವಾರ ರಾತ್ರಿ ಕಾಶ್ಮೀರಿ ಪಂಡಿತ ಸಮುದಾಯದ ಒಬ್ಬ ವ್ಯಕ್ತಿಯ ಹತ್ಯೆಯಾಗಿದೆ. 36 ವರ್ಷದ ರಾಹುಲ್ ಭಟ್ ಹತ್ಯೆಯಾದವರು. ಬುಡಗಾಮ್ ಜಿಲ್ಲೆಯ ಛದೂರಾ ಗ್ರಾಮದಲ್ಲಿರುವ ತಲಶೀಲ್ದಾರ್ ಕಚೇರಿಗೆ ನುಗ್ಗಿ ಉಗ್ರರು ರಾಹುಲ್ ಭಟ್ ಮೇಲೆ ಗುಂಡಿನ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಈ ಘಟನೆ ಆದ ಬೆನ್ನಲ್ಲೇ ಸಮುದಾಯದ ಹಲವು ಜನರು ಜಮ್ಮು ಕಾಶ್ಮೀರದ ಹಲವೆಡೆ ಬೃಹತ್ ಪ್ರತಿಭಟನೆ ನಡೆಸಿದರು.
ಕಾಶ್ಮೀರಿ ಪಂಡಿತರು ತಮ್ಮ ಶಿಬಿರಗಳಿಂದ ಹೊರಬಂದು ವಿವಿಧ ರಸ್ತೆಗಳಿಗೆ ತಡೆಯೊಡ್ಡಿದರು. ಕೇಂದ್ರ ಸರಕಾರದ ವೈಫಲ್ಯವನ್ನೂ ಅವರು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಕಾಶ್ಮೀರಿ ಸಂಗೀತ ಬೆಳಗಿಸಿದ ಸಂತೂರ್ ವಾದಕ ಶಿವಕುಮಾರ್ ಶರ್ಮಾ ಪರಿಚಯ
1988-1990ರಲ್ಲಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾದ ಹಿನ್ನೆಲೆಯಲ್ಲಿ ಬಹುತೇಕ ಕಾಶ್ಮೀರಿ ಪಂಡಿತ ಸಮುದಾಯದವರು ರಾಜ್ಯ ತೊರೆದು ಹೋಗಿದ್ದರು. ದಶಕಗಳ ಕಾಲದಿಂದ ಅವರು ವಿವಿಧೆಡೆಯಲ್ಲಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕೇಂದ್ರ ಸರಕಾರ ಪಂಡಿತರಿಗೆ ಕಾಶ್ಮೀರದಲ್ಲಿ ಮರುವಸತಿ ಕಲ್ಪಿಸುವ ಯೋಜನೆ ಹಮ್ಮಿಕೊಂಡಿದೆ. ಆದರೆ, ಈ ರಾಜ್ಯದಲ್ಲಿ ಇನ್ನೂ ಭದ್ರತಾ ಪರಿಸ್ಥಿತಿ ಸುಧಾರಣೆ ಆಗಿಲ್ಲ ಎಂಬುದಕ್ಕೆ ನಿನ್ನೆ ಒಬ್ಬ ಪಂಡಿತನ ಹತ್ಯೆ ಸಾಕ್ಷಿಯಾಗಿದೆ.
ಪುಲ್ವಾಮದಲ್ಲಿ ಭಯೋತ್ಪಾದಕರಿಂದ ಪೊಲೀಸ್ ಪೇದೆಗೆ ಗುಂಡು!
ಹತ್ಯೆಯಾದ ರಾಹುಲ್ ಭಟ್ ತಹಶೀಲ್ದಾರ್ ಕಚೇರಿಯಲ್ಲಿ ನೌಕರಿಯಲ್ಲಿದ್ದರೆನ್ನಲಾಗಿದೆ. ಈ ದಾಳಿ ಘಟನೆಯಲ್ಲಿ ಇಬ್ಬರು ಉಗ್ರರು ಭಾಗಿಯಾಗಿದ್ದಾರೆ. ಹತ್ಯೆಗೆ ಪಿಸ್ತೂಲ್ ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ, ಘಟನಾ ಸ್ಥಳದ ಸುತ್ತಮುತ್ತ ಪ್ರದೇಶಗಳಲ್ಲಿ ಉಗ್ರರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. ಇನ್ನೂ ಕೂಡ ಉಗ್ರರ ಸುಳಿವು ಸಿಕ್ಕಿಲ್ಲ.
(ಒನ್ಇಂಡಿಯಾ ಸುದ್ದಿ)