ಕಾಶ್ಮೀರ: ಪಿಡಿಪಿ ನಾಯಕರ ಸಭೆಗೆ ಅಡ್ಡಿ, ಮನೆಯಿಂದ ಹೊರಬರದಂತೆ ತಡೆದ ಪೊಲೀಸರು
ಶ್ರೀನಗರ, ಸೆಪ್ಟೆಂಬರ್ 3: ಪಕ್ಷದ ಅಧಿಕೃತ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಾಯಕರು ಆರೋಪಿಸಿದ್ದಾರೆ. ಕಳೆದ ವರ್ಷದ ಆಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ 370ನೇ ವಿಧಿ ರದ್ದತಿಯ ಬಳಿಕ ಪಿಡಿಪಿ ಇದೇ ಮೊದಲ ಬಾರಿ ಅಧಿಕೃತವಾಗಿ ಪಕ್ಷದ ಸಭೆ ಆಯೋಜಿಸಿತ್ತು. ಆದರೆ ಸಭೆ ನಡೆಯುವ ಕೆಲವು ಗಂಟೆಗಳ ಮುನ್ನ ಪೊಲೀಸರು ಪಿಡಿಪಿಯ ಹಿರಿಯ ಮುಖಂಡರಿಗೆ ಮನೆಯಿಂದ ಹೊರಗೆ ಬರಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
'ನಮಗೆ ಭೇಟಿ ಮಾಡಲು ಅವಕಾಶವನ್ನೇ ನೀಡಿಲ್ಲ. ಪಕ್ಷದ ಮುಖಂಡರಿಗೆ ಮನೆಯಿಂದ ಹೊರಬರಲು ಅನುಮತಿ ನೀಡುತ್ತಿಲ್ಲ. ನನಗೆ ಕೂಡ ಹೊರಗೆ ಬರಲು ಬಿಟ್ಟಿಲ್ಲ. ಹೀಗಾಗಿ ನಾವು ಸಭೆಯನ್ನು ರದ್ದುಗೊಳಿಸಿದ್ದೇವೆ' ಎಂದು ಪಿಡಿಪಿಯ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಲೋನ್ ತಿಳಿಸಿದ್ದಾರೆ.
''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್''
ತಮ್ಮ ಮನೆಯಿಂದ ಹೊರಗೆ ಬರಲು ಪೊಲೀಸರು ಅವಕಾಶ ನೀಡದ ಹಲವು ವಿಡಿಯೋಗಳನ್ನು ಕೆಲವು ಪಿಡಿಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಮನೆಯಿಂದ ಹೊರಗೆ ಬರಲು ನಿಮಗೆ ಅನುಮತಿಯಿಲ್ಲ ಎಂದು ಪೊಲೀಸರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಒಳಾಂಗಣದಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿದ್ದರೂ ಇದರ ಬಗ್ಗೆ ಪಿಡಿಪಿ ಮುಖಂಡರು ಕಾಶ್ಮೀರದ ವಿಭಾಗೀಯ ಆಯುಕ್ತರು, ಕಾಶ್ಮೀರದ ಐಜಿಪಿ, ಐಜಿಪಿ ಭದ್ರತೆ, ಶ್ರೀನಗರ ಡಿಸಿ, ಎಸ್ಎಸ್ಪಿ ಮತ್ತು ಎಸ್ಎಸ್ಪಿ ಭದ್ರತೆಯ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ತಮ್ಮ ಪತ್ರಕ್ಕೆ ಸರ್ಕಾರದ ಯಾವುದೇ ವಿಭಾಗದಿಂದ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಹಿರಿಯ ಮುಖಂಡರು ಮಾತ್ರವೇ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಅಲ್ಲಿ ಹೆಚ್ಚಿನ ಜನರು ಸೇರುತ್ತಿರಲಿಲ್ಲ. ಜತೆಗೆ ಕೊರೊನಾ ವೈರಸ್ ಸಂಬಂಧಿಸಿದ ಎಲ್ಲ ಮುಂಜಾಗ್ರತೆ ಮತ್ತು ನಿಯಮಗಳನ್ನು ಪಾಲಿಸುತ್ತಿದ್ದೆವು. ಸಭೆ ನಡೆಸಲು ನಮಗೆ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. ಆದರೂ ಸುರಕ್ಷತೆಯ ಕ್ರಮ ತೆಗೆದುಕೊಳ್ಳಲು ಬಯಸಿದ್ದೆವು ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹೊಸ ಅಲೆ ಸೃಷ್ಟಿಸುತ್ತಾ ಈ ಹೊಸ ಪಕ್ಷ?
ಪಿಡಿಪಿಯ ಬಹುತೇಕ ಮುಖಂಡರು ಗೃಹ ಬಂಧನದಲ್ಲಿದ್ದಾರೆ. ಶ್ರೀನಗರ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಗೆ ತೆರಳಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಅವರು ಮನೆಯಿಂದ ಹೊರಬರಲು ಮತ್ತು ಬೇರೆಯವರಿಗೆ ಅವರ ಮನೆಗೆ ಹೋಗಲು ಅವಕಾಶ ನೀಡಲಿಲ್ಲ.