ಜಮ್ಮು- ಕಾಶ್ಮೀರಲ್ಲಿ ಫೋನ್, ಇಂಟರ್ ನೆಟ್ ಸೇವೆ ಭಾಗಶಃ ಪುನರಾರಂಭ
ಶ್ರೀನಗರ್, ಆಗಸ್ಟ್ 9: ಭಾರೀ ಭದ್ರತೆಯಲ್ಲಿ ಐದು ದಿನದಿಂದ ಇರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಫೋನ್ ಸೇವೆ ಹಾಗೂ ಇಂಟರ್ ನೆಟ್ ಭಾಗಶಃ ಪುನರಾರಂಭ ಆಯಿತು. ಇನ್ನು ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಲು ಅನುಕೂಲ ಆಗುವಂತೆ ಚಲನ ವಲನದಲ್ಲಿ ವಿನಾಯಿತಿ ನೀಡಲಾಯಿತು.
ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದು, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಮೇಲೆ ಕಣಿವೆ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶ್ರೀನಗರದಲ್ಲಿನ ಜಾಮಾ ಮಸೀದಿಯಾ ಗೇಟ್ ಗಳನ್ನು ಮುಚ್ಚಲಾಗಿತ್ತು. ನಗರದ ಮುಖ್ಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಅನುಮಾನ ಎಂಬುದರ ಸೂಚನೆ ಅದಾಗಿತ್ತು.
ಜಮ್ಮು ಕಾಶ್ಮೀರ:ಇಂದಿನಿಂದ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಪುನರಾರಂಭ
ಶ್ರೀನಗರ್ ಒಳ ಭಾಗದ ಸಣ್ಣ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಲಾಗಿತ್ತು. ಅಲ್ಲಿ ಅಗತ್ಯ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲದೆ ಪ್ರಾರ್ಥನೆ ಪೂರ್ತಿಯಾದರೆ ಇನ್ನಷ್ಟು ನಿಬಂಧನೆಗಳ ಸಡಿಲಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿದ ನಂತರ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಪ್ರತಿಭಟನೆ ಅಥವಾ ಮೆರವಣಿಗೆ ಆಗಬಾರದು ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಸೇರಿ ನಾನೂರು ಮಂದಿ ರಾಜಕೀಯ ನಾಯಕರನ್ನು ವಶದಲ್ಲಿ ಇರಿಸಿಕೊಳ್ಳಲಾಗಿದೆ.
Sushma Chauhan, Deputy Magistrate (DM) Jammu District: Section 144 (gathering of more than 4 people banned) withdrawn from Jammu Municipal limits. All school, and colleges to open tomorrow (August 10). pic.twitter.com/EezNKkIKpu
— ANI (@ANI) August 9, 2019
ರಾಜ್ಯದ ಪರಿಸ್ಥಿತಿ ಬಗ್ಗೆ ಪರಾಮರ್ಶಿಸಿದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಶುಕ್ರವಾರದ ಪ್ರಾರ್ಥನೆಗೆ ಹಾಗೂ ಮುಂದಿನ ವಾರ ಈದ್ ಹಬ್ಬಕ್ಕೆ ಅನುಕೂಲ ಆಗುವಂತೆ ಕೆಲವು ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ. ಕರ್ಫ್ಯೂ ಇರುವ ಹೊರತಾಗಿಯೂ ಹಲವಾರು ಮಂದಿ ಕಾಶ್ಮೀರಿಗಳು ಕುಟುಂಬದ ಜತೆಗೆ ಈದ್ ಆಚರಣೆಗಾಗಿ ವಿಮಾನಗಳಲ್ಲಿ ಶ್ರೀನಗರ್ ಗೆ ತೆರಳುತ್ತಿದ್ದಾರೆ.