ಜಮ್ಮು ಮತ್ತು ಕಾಶ್ಮೀರದ ಗೌರವ ಮರಳಿ ಕೊಡಿಸಿ ಎಂದು ಪಾಕಿಸ್ತಾನವನ್ನು ಕೇಳಲೇ?: ಮೆಹಬೂಬಾ
ಶ್ರೀನಗರ, ಏಪ್ರಿಲ್ 12: ಒಂದೊಮ್ಮೆ ದೇಶಕ್ಕೆ ಜಮ್ಮು ಕಾಶ್ಮೀರ ಜನತೆಯ ಪ್ರೀತಿ ಬೇಕಾಗಿದ್ದರೆ, ಜನತೆಯಿಂದ ಕಸಿದುಕೊಂಡ ಗೌರವವನ್ನು ಕೂಡ ಮರಳಿ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ರಾಜ್ಯದ ಅಸ್ತಿತ್ವವನ್ನು ಮರಳಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೆಹಬೂಬಾ ಮುಫ್ತಿ ಸಮನ್ಸ್ಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಕಾರ
ಬಂದೂಕಿನ ಭಾಷೆ ಯಾರಿಗೂ ಅರ್ಥವಾಗದು, ಒಂದೊಮ್ಮೆ ಬಂದೂಕಿನಿಂದ ಪರಿಹಾರ ದೊರೆಯುತ್ತದೆ ಎಂದು ನೀವು ಅಂದುಕೊಂಡರೆ ಅದು ಸಾವಿಗೆ ಕಾರಣವಾಗುತ್ತದೆ. ಹೀಗಾಗಿ ಬಂದೂಕು ಕಳಚಿ ಮುಖ್ಯವಾಹಿನಿಗೆ ಬಂದು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಂತೆ ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿರುವ ಕಣಿವೆಯ ಜನತೆಗೆ ಮುಫ್ತಿ ಮನವಿ ಮಾಡಿದ್ದಾರೆ.
ನಿಮಗೆ ಜಮ್ಮು ಮತ್ತು ಕಾಶ್ಮೀರ ಜನರ ಪ್ರೀತಿ, ವಿಶ್ವಾಸ ಬೇಕು ಎಂದಾದರೆ ಕಸಿದುಕೊಂಡಿರುವ ನಮ್ಮ ಆತ್ಮ ಗೌರವವನ್ನು ಮರಳಿ ಕೊಡಿ. ನಮ್ಮ ಈ ಬೇಡಿಕೆ ಕೇಳಿಸಿಕೊಂಡರೆ ಬಿಜೆಪಿಗೆ ಕೋಪ ಬರುತ್ತದೆ. ನಾವೇನು ಪಾಕಿಸ್ತಾನದ ಮುಂದೆ ಬೇಡಿಕೆ ಮಂಡಿಸುತ್ತಿಲ್ಲ ಅದು ನೆನಪಿನಲ್ಲಿರಲಿ ಎಂದರು.
ನಮ್ಮ ಗೌರವ ಮರಳಿ ಕೊಡಿ ಎಂದಷ್ಟೇ ನಾನು ದೇಶಕ್ಕೆ ಕೇಳಿಕೊಳ್ಳುತ್ತೇನೆ. ನಮ್ಮ ದೇಶ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು. ಮೋದಿ ಅಸ್ಸಾಂನ ಉಗ್ರರಿಗೆ ಬಂದೂಕು ಬದಿಗಿಟ್ಟು ಮುಖ್ಯವಾಹಿನಿಗೆ ಬರಲು ಮನವಿ ಮಾಡುತ್ತಾರೆ, ಹಾಗೆಯೇ ಜಮ್ಮು ಮತ್ತು ಕಾಶ್ಮೀರದ ದಾರಿ ತಪ್ಪಿರುವ ಯುವಕರಲ್ಲೂ ಇದೇ ಮನವಿ ಮಾಡಬಹುದಲ್ಲವಾ ಎಂದು ಮೆಹಬೂಬಾ ಮುಫ್ತಿ ಪ್ರಶ್ನೆ ಮಾಡಿದ್ದಾರೆ.