'ಕೃಷಿ ಕಾಯ್ದೆ ಜಾರಿ, ರದ್ದು ಎರಡೂ ಚರ್ಚಿಸದೆ ಮಾಡಿದ್ದಾರೆ': ಒಮರ್ ಅಬ್ದುಲ್ಲಾ
ಶ್ರೀನಗರ, ನವೆಂಬರ್ 29: "ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಯಾರ ಜೊತೆಯೂ ಚರ್ಚೆಯನ್ನೇ ನಡೆಸಿಲ್ಲ, ಈಗ ರದ್ದು ಮಾಡುವ ಸಂದರ್ಭದಲ್ಲಿಯೂ ಯಾರ ಜೊತೆಯೂ ಚರ್ಚೆಯನ್ನೇ ಮಾಡಿಲ್ಲ," ಎಂದು ನ್ಯಾಷನಲ್ ಕಾನ್ಪರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಸೋಮವಾರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಒಂದು ವರ್ಷಗಳಿಂದ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಹಲವಾರು ಹಂತಗಳ ಮಾತುಕತೆ ನಡೆದರೂ ಕೂಡಾ ಎಲ್ಲವೂ ವಿಫಲವಾಗಿದ್ದವು. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಕೃಷಿ ಕಾಯ್ದೆ ರದ್ಧತಿ ಮಸೂದೆ ಅಂಗೀಕರಿಸಿದರೂ ಹೋರಾಟ ನಿಲ್ಲಿಸಲ್ಲ: ಟಿಕಾಯತ್
ಅದರಂತೆ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ-ಗಲಾಟೆ ನಡುವೆ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಅಂಗೀಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ.
ಚರ್ಚಿಸದೆಯೇ ಮಸೂದೆ ರದ್ದು ಮಾಡಿದ್ದಾರೆ ಎಂದ ಒಮರ್ ಅಬ್ದುಲ್ಲಾ
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಹೊಸ ಮಸೂದೆಯ ಮೇಲೆ ಚರ್ಚೆ ನಡೆಸಲು ಅವಕಾಶ ದೊರೆಯದ ಕಾರಣದಿಂದಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಒಮರ್ ಅಬ್ದುಲ್ಲಾ, "ಈ ಕೃಷಿ ಕಾಯ್ದೆಯನ್ನು ಚರ್ಚೆ ನಡೆಸದೆಯೇ ಅಂಗೀಕಾರ ಮಾಡಲಾಗಿದೆ. ಈಗ ಯಾವುದೇ ಚರ್ಚೆಯನ್ನು ನಡೆಸದೆಯೇ ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ , "ಇದು ಹೊಸ ಭಾರತದಲ್ಲಿ ಪ್ರಜಾಪ್ರಭುತ್ವದ ಹೊಸ ಮಾದರಿ," ಎಂದಿದ್ದಾರೆ.
Winter Session Day 1 Roundup; ಮೊದಲ ದಿನದ ಕಲಾಪದ ಮುಖ್ಯಾಂಶ
ದೆಹಲಿಯ ಗಡಿಯಲ್ಲಿ ಸುಮಾರು ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆಯು ಇಂದು ಉಭಯ ಸದನಗಳಲ್ಲಿ ಅಂಗೀಕಾರ ಆಗಿದೆ. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮತಿಯು ಬಾಕಿ ಉಳಿದಿದೆ.
ಚರ್ಚೆ ನಡೆಸಲು ಬಿಟ್ಟಿಲ್ಲ: ರಾಹುಲ್ ಗಾಂಧಿ ಆಕ್ರೋಶ
ಇನ್ನು ಕೃಷಿ ಕಾಯ್ದೆಯನ್ನು ರದ್ದು ಮಾಡಲು ಅವಕಾಶ ನೀಡುವ ಮಸೂದೆಯನ್ನು ಮಂಡನೆ ಮಾಡಿದ ಬಳಿಕ ಚರ್ಚೆ ನಡೆಸಲು ಅವಕಾಶ ನೀಡಿಲ್ಲ ಎಂಬ ಕಾರಣದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಯಾವುದೇ ಚರ್ಚೆಗೆ ಅವಕಾಶ ನೀಡಿಲ್ಲ. ಎಂಎಸ್ಪಿ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ, ಹುತಾತ್ಮ ಅನ್ನದಾತರಿಗೆ ನ್ಯಾಯ ಒದಗಿಸುವ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ, ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವರನ್ನು ವಜಾ ಮಾಡಿದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ," ಎಂದು ಆರೋಪ ಮಾಡಿದ್ದಾರೆ. "ಸಂಸತ್ತಿನಲ್ಲಿ ನಮಗೆ ಇರುವ ಚರ್ಚೆಯ ಹಕ್ಕನ್ನು ಕಿತ್ತುಕೊಂಡವರು ಯಾರು," ಎಂದು ಈ ಸಂದರ್ಭದಲ್ಲೇ ಟ್ವೀಟ್ ಮೂಲಕ ಪ್ರಶ್ನೆ ಮಾಡಿರುವ ರಾಹುಲ್ ಗಾಂಧಿ, "ಇದು ವೈಫಲ್ಯ, ಈ ಸರ್ಕಾರ ಹೇಡಿ ಸರ್ಕಾರ," ಎಂದು ಟೀಕೆ ಮಾಡಿದ್ದಾರೆ.