ಭಾರತೀಯ ಸೇನೆಯಿಂದ ಪಾಕ್ ನ 7 ಸೇನಾ ಠಾಣೆಗಳು ಧ್ವಂಸ, ಸಾವು-ನೋವು
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 2: ಗಡಿ ನಿಯಂತ್ರಣ ರೇಖೆ ಆಚೆಗಿನ ಪಾಕಿಸ್ತಾನದ ಏಳು ಸೇನಾ ಠಾಣೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಭಾರತ- ಪಾಕ್ ಗಡಿ ಭಾಗದ ರಜೌರಿ, ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯು ಅಪ್ರಚೋದಿತ ಶೆಲ್ಲಿಂಗ್ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನಿ ಸೇನಾ ಠಾಣೆಗಳು ಧ್ವಂಸವಾಗಿವೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಪಾಕಿಸ್ತಾನ ಸೇನೆಯಲ್ಲೂ ಸಾವು-ನೋವು ಸಂಭವಿಸಿದೆ ಎನ್ನಲಾಗುತ್ತಿದೆ. ಪೂಂಛ್ ಹಾಗೂ ರಜೌರಿ ಜಿಲ್ಲೆಯಲ್ಲಿ ಗಡಿಯ ಬಳಿ ಇರುವ ಎಲ್ಲ ಶಾಲೆಗಳಿಗೂ ಮುಂಜಾಗ್ರತೆ ಕ್ರಮವಾಗಿ ರಜಾ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದಿಂದ ನಡೆದ ಶೆಲ್ಲಿಂಗ್ ನಲ್ಲಿ ಸೋಮವಾರದಂದು ಬಿಎಸ್ ಎಫ್ ಇನ್ ಸ್ಪೆಕ್ಟರ್, ಐದು ವರ್ಷದ ಬಾಲಕಿ ಸೇರಿ ಮೂವರು ಸಾವನ್ನಪ್ಪಿ, ಇಪ್ಪತ್ನಾಲ್ಕು ಮಂದಿ ಗಾಯಗೊಂಡಿದ್ದರು. ಅದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ
ರಜೌರಿ ಜಿಲ್ಲೆಯ ನೌಷೇರಾ ವಲಯ, ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ತನಕ ಭಾರೀ ಮಾರ್ಟರ್ ಶೆಲ್ಲಿಂಗ್ ಆಗಿದೆ. ಅದೇ ರೀತಿ ಶಾಪುರ್ ಹಾಗೂ ನೌಷೇರಾದಲ್ಲಿ ಮಂಗಳವಾರ ಕೂಡ ಪಾಕ್ ಸೇನೆಯಿಂದ ಗುಂಡಿನ ದಾಳಿ ಹಾಗೂ ಶೆಲ್ಲಿಂಗ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಗಡಿ ನಿಯಂತ್ರಣ ರೇಖೆ ಆಚೆಯ ಪಾಕ್ ಆಕ್ರಮಿತ ಕಾಶ್ಮೀರದ ರಾಖ್ ಚಿಕ್ರಿ ಮತ್ತು ರಾವಲ್ ಕೋಟೆಯ ಮುಂಚೂಣಿ ಪ್ರದೇಶದಲ್ಲಿರುವ ಸೇನಾ ಠಾಣೆಗಳನ್ನು ಧ್ವಂಸ ಮಾಡಲಾಗಿದೆ. ಪಾಕಿಸ್ತಾನದ ಕಡೆ ದಾಳಿಯಲ್ಲಿ ಸಾವು- ನೋವು ಸಂಭವಿಸಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಪ್ರತಿ ದಾಳಿಯಲ್ಲಿ ಪಾಕಿಸ್ತಾನದ ಮೂವರು ಯೋಧರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ದ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ ಪಿಆರ್) ತಿಳಿಸಿದೆ. ಪಾಕಿಸ್ತಾನವು ಭಾರೀ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ. ಪೂಂಛ್ ನಲ್ಲಿ ನಾಗರಿಕ ವಸತಿ ಪ್ರದೇಶಗಳನ್ನೇ ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದ್ದು, ಈ ಭಾಗದ ಗ್ರಾಮಸ್ಥರು ಭಯಗೊಂಡಿದ್ದಾರೆ.
ಭಾರತದ ಮೇಲೆ ಪಾಕ್ ಬಾಲಕೋಟ್ ಮಾದರಿ ದಾಳಿ ಮಾಡಲು ಯತ್ನಿಸಿತ್ತು: ಆದರೆ...
ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್ ನಡೆಯುತ್ತಿರುವುದರಿಂದ ಜನರು ತಮ್ಮ ಮನೆ ಬಿಟ್ಟು ಹೊರ ಬರಬಾರದು ಎಂದು ಸಲಹೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.