ಜಮ್ಮು-ಕಾಶ್ಮೀರದ ಗಡಿಯಲ್ಲಿ ಮತ್ತೊಮ್ಮೆ ಬಾಲ ಬಿಚ್ಚಿದ ಪಾಕಿಸ್ತಾನ
ಶ್ರೀನಗರ್, ಜನವರಿ.10: ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಯುದ್ಧದ ಆತಂಕ ಸೃಷ್ಟಿಯಾಗಿದೆ. ಇರಾನ್-ಅಮೆರಿಕಾ ನಡುವೆ ಯುದ್ಧದ ಕಾರ್ಮೋಡ ಕವಿಯುತ್ತಿದೆ. ವಿಶ್ವದ ರಾಷ್ಟ್ರಗಳೆಲ್ಲ ಎರಡು ದೇಶಗಳ ನಡುವೆ ಸಂಧಾನಕ್ಕೆ ಭಾರತವೇ ಮಧ್ಯಪ್ರವೇಶಿಸಬೇಕು ಎಂದು ಹೇಳುತ್ತಿವೆ.
ಭಾರತವನ್ನು ದೊಡ್ಡ ದೊಡ್ಡ ರಾಷ್ಟ್ರಗಳ ನಾಯಕರೇ ಹಾಡಿ ಹೊಗಳುತ್ತಿದ್ದರೆ ಪಾಕಿಸ್ತಾನದ ಎದೆಯಲ್ಲಿ ಉರಿ ಹೊತ್ತಿಕೊಂಡಂತೆ ಕಾಣುತ್ತಿದೆ. ಇಷ್ಟುದಿನ ಬಾಲ ಮುದುರಿಕೊಂಡಿದ್ದ ನೆರೆಯ ರಾಷ್ಟ್ರ ಇದೀಗ ಮತ್ತೊಮ್ಮೆ ಬಾಲ ಬಿಚ್ಚಿದೆ.
ಜಮ್ಮು ಕಾಶ್ಮೀರ ಸ್ಥಿತಿ ಅಧ್ಯಯನಕ್ಕೆ ಜಾಗತಿಕ ನಿಯೋಗ ಭೇಟಿ, ಐರೋಪ್ಯ ಒಕ್ಕೂಟದಿಂದ ಬಹಿಷ್ಕಾರ
ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದು, ಅಪ್ರಚೋದಿತ ಮೋಟಾರ್ ಬಾಂಬ್ ದಾಳಿಯಲ್ಲಿ ಭಾರತದ ಇಬ್ಬರು ಸೇನಾ ಗಡಿ ಪಾಲಕರು ಹುತಾತ್ಮರಾಗಿದ್ದಾರೆ. ಮೂವರು ಸೇನಾ ಪಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಣಿವೆ ಗಡಿಯಲ್ಲಿ ಮೋಟಾರ್ ಬಾಂಬ್ ದಾಳಿ:
ಜಮ್ಮು-ಕಾಶ್ಮೀರ ಪೂಂಚ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನ ಸೇನಾ ಪಡೆಯು, ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಮೋಟಾರ್ ಬಾಂಬ್ ದಾಳಿಯನ್ನು ನಡೆಸಿದೆ. ಅಲ್ಲದೇ ಪಾಕ್ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಗುಲ್ಪುರ್ ಸೆಕ್ಟರ್ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಗಡಿ ಪಾಲಕರ ಮೇಲೆ ದಾಳಿ ನಡೆಸಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಹುತಾತ್ಮರಾಗಿದ್ದರೆ, ಗಂಭೀರವಾಗಿ ಗಾಯಗೊಂಡ ಮೂವರು ಗಡಿ ಪಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.