ಕೂಲಿ ಕಾರ್ಮಿಕನನ್ನು ಕೊಂದು ತಲೆ ಕತ್ತರಿಸಿದ ಪಾಕ್ ಸೇನೆ
ಜಮ್ಮು, ಜನವರಿ 13: ಪಾಕಿಸ್ತಾನದ ಗಡಿ ಕ್ರಿಯಾ ತಂಡವು (ಬಿಎಟಿ) ಕೂಲಿಯಾಳೊಬ್ಬನ ಶಿರಚ್ಛೇದನ ಮಾಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ (ಎಲ್ಓಸಿ) ಇಬ್ಬರು ನಾಗರಿಕರನ್ನು ಹತ್ಯೆ ಮಾಡಲಾಗಿತ್ತು. ಅದರಲ್ಲಿ ಒಬ್ಬ ನಾಗರಿಕನ ತಲೆ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಟಿ ಈ ರೀತಿ ನಾಗರಿಕರ ಶಿರಚ್ಛೇದ ಮಾಡಿರುವುದು ಇದೇ ಮೊದಲ ಘಟನೆಯಾಗಿದೆ. ಬಿಎಟಿಯು ಪಾಕಿಸ್ತಾನದ ಸೇನೆಯ ಸಿಬ್ಬಂದಿ ಮತ್ತು ಉಗ್ರರು ಇಬ್ಬರನ್ನೂ ಒಳಗೊಂಡಿದೆ. ಈ ಹಿಂದೆ ಈ ತಂಡವು ಭಾರತದ ಅನೇಕ ಸೈನಿಕರನ್ನು ಇದೇ ರೀತಿ ಅಮಾನವೀಯವಾಗಿ ಶಿರಚ್ಛೇದ ಮಾಡಿದ ಘಟನೆಗಳು ನಡೆದಿವೆ.
ಸಂಸತ್ ಬಯಸಿದರೆ ಪಾಕ್ ಆಕ್ರಮಿತ ಪ್ರದೇಶ ವಶಕ್ಕೆ ಪಡೆಯಲು ಸಿದ್ಧ: ನರವಾಣೆ
ಕೂಲಿಯಾಳು ಮೊಹಮ್ಮದ್ ಅಸ್ಲಾಮ್ (28) ಎಂಬಾತನನ್ನು ಕ್ರೂರವಾಗಿ ಇರಿದು ಕೊಂದು ತಲೆ ಕತ್ತರಿಸಲಾಗಿದೆ. ಸ್ಥಳದಲ್ಲಿ ಆತನ ದೇಹ ಮಾತ್ರ ಪತ್ತೆಯಾಗಿದ್ದು, ರುಂಡ ಸಿಕ್ಕಿಲ್ಲ.
ವೃತ್ತಿಪರ ಮತ್ತು ನೈತಿಕತೆಗಳನ್ನು ಒಳಗೊಂಡಿರುವ ಸೇನೆಯು ಇಂತಹ ಹೇಯ ಕೃತ್ಯವನ್ನು ಮಾಡುವುದಿಲ್ಲ. ಇಂತಹ ಕೃತ್ಯಗಳಿಗೆ ಸೇನಾ ಕ್ರಮದ ಮೂಲಕವೇ ಸೂಕ್ತ ಉತ್ತರ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ತಿಳಿಸಿದರು.
ಎಲ್ಓಸಿಗೆ ಸಮೀಪವಿರುವ ಮುಂಚೂಣಿ ಸೇನಾ ನೆಲೆಗೆ ಅಗತ್ಯವಿದ್ದ ವಿವಿಧ ಸರಕುಗಳನ್ನು ಕೊಂಡೊಯ್ಯುತ್ತಿದ್ದ ಕೂಲಿಯಾಳುಗಳ ಗುಂಪಿನ ಮೇಲೆ ಪಾಕಿಸ್ತಾನದ ಪಡೆಗಳು ನಡೆಸಿದ ದಾಳಿಯಲ್ಲಿ ಗುಲ್ಪುರ್ ವಲಯದ ಕಸ್ಸಾಲಿಯನ್ ಗ್ರಾಮದ ಮೊಹಮ್ಮದ್ ಅಸ್ಲಾಮ್ ಮತ್ತು ಅಲ್ತಾಫ್ ಹುಸೇನ್ (23) ಮೋರ್ಟಾರ್ ತಗುಲಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದರು.
ಆದರೆ ಇಬ್ಬರು ಕೂಲಿಯಾಳುಗಳ ಪೈಕಿ ಒಬ್ಬನ ತಲೆ ನಾಪತ್ತೆಯಾಗಿದ್ದು, ಪಾಕಿಸ್ತಾನದ ಬಿಎಟಿ ಈ ಕೃತ್ಯ ಎಸಗಿರಬಹುದು ಎಂದು ಸೇನಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.