ಎಲ್ಒಸಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ
ಶ್ರೀನಗರ, ಅಕ್ಟೋಬರ್ 1: ಅತ್ತ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಚೀನಾ ತಗಾದೆ ತೆಗೆಯುತ್ತಿದ್ದರೆ, ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಈ ಭಾಗದಲ್ಲಿ ಪಾಕಿಸ್ತಾನ ಪಡೆಗಳು ತೀವ್ರ ಸ್ವರೂಪದಲ್ಲಿ ಫಿರಂಗಿ ಗುಂಡುಗಳು, ಮೋರ್ಟಾರ್ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿವೆ.
ಗುರುವಾರ ಮಧ್ಯಾಹ್ನ ಕುಪ್ವಾರ ಜಿಲ್ಲೆಯ ಕೇರನ್ ಮತ್ತು ಮಚ್ಚಲ್ ವಲಯಗಳಲ್ಲಿ ಈ ಉಲ್ಲಂಘನೆ ನಡೆದಿದೆ. ಇದಕ್ಕೆ ಭಾರತೀಯ ಸೇನೆ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದು, ಗಡಿಯಾಚೆಗೂ ಗುಂಡು ಹಾರಿಸಿದೆ.
ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ
ಇದಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತೀಯ ಸೇನೆ, ಗುರುವಾರ ಬೆಳಿಗ್ಗೆ ಕುಪ್ವಾರದ ನೌಗಮ್ ಭಾಗದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನವು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು.
ಪ್ರತಿವರ್ಷವೂ ಹಿಮಪಾತ ಸಂಭವಿಸುವ ಮುನ್ನ ಪಾಕಿಸ್ತಾನವು ಗಡಿಯುದ್ಧಕ್ಕೂ ಉಗ್ರರನ್ನು ಕಳುಹಿಸುತ್ತದೆ. ಈ ವರ್ಷ ಕೂಡ ಅದು ನಡೆದಿದೆ. ಗುರೆಜ್ ಮತ್ತು ಬಂಡಿಪೊರಾ ವಲಯಗಳಲ್ಲಿ ಒಳನುಸುಳುವಿಕೆ ಬಗ್ಗೆ ನಮಗೆ ಮಾಹಿತಿ ದೊರಕಿದೆ. ಈ ಭಾಗಗಳಲ್ಲಿ ಸೇನೆ ಕೂಡ ಸಂಪರ್ಕವನ್ನು ಬಲಪಡಿಸಿದೆ. ಗಡಿಗೆ ಸಮೀಪದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳು ದೊರೆತಿವೆ. ಬಾರಾಮುಲ್ಲಾ ಮತ್ತು ಹಂದ್ವಾರದಲ್ಲಿ ಕೂಡ ಒಳನುಸುಳುವ ಪ್ರಯತ್ನ ನಡೆದಿತ್ತು. ಅಂತಹ ಪ್ರಯತ್ನಗಳನ್ನು ನಮ್ಮ ಪಡೆ ಹತ್ತಿಕ್ಕುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.