ಲವ್ ಜಿಹಾದ್ಗಷ್ಟೇ ವಿರೋಧ, ಅಂತರ್ ಧರ್ಮೀಯ ಮದುವೆಗೆ ಅಲ್ಲ: ವಿಎಚ್ಪಿ
ಜಮ್ಮು, ಜುಲೈ 1: ವಿಶ್ವ ಹಿಂದೂ ಪರಿಷತ್ ಅಂತರ್ ಧರ್ಮೀಯ ಮದುವೆಯನ್ನು ವಿರೋಧಿಸುವುದಿಲ್ಲ. ಆದರೆ, ಹಿಂದೂ ಯುವತಿಯರನ್ನು ಬಲೆಗೆ ಹಾಕಿಕೊಂಡು ಅವರನ್ನು ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ಯುವಕರು ಮದುವೆಯಾಗುವ 'ಲವ್ ಜಿಹಾದ್'ಗೆ ಮಾತ್ರ ತಮ್ಮ ವಿರೋಧ ಎಂದು ವಿಎಚ್ಪಿ ಹೇಳಿದೆ.
'ವಿಎಚ್ಪಿ ಅಂತರ್ ಧರ್ಮೀಯ ಮದುವೆಯ ವಿರುದ್ಧವಿಲ್ಲ. ಆದರೆ, ಮುಸ್ಲಿಂ ಯುವಕರು ಸಂಚು ನಡೆಸಿ ಹಿಂದೂ ಯುವತಿಯರನ್ನು ಬಲೆಗೆ ಕೆಡವಿಕೊಳ್ಳುವುದು ಹಾಗೂ ಆಕೆಯ ಮುಗ್ಧತೆಯ ಲಾಭ ಪಡೆದುಕೊಂಡು ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವ ಕೃತ್ಯವನ್ನು ವಿರೋಧಿಸುತ್ತೇವೆ' ಎಂದು ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಅಚ್ಚರಿ ಮೂಡಿಸಿದ ವಿಎಚ್ಪಿ ನಡೆ
ಜಮ್ಮುವಿನಲ್ಲಿ ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ನೇತೃತ್ವದಲ್ಲಿ ನಡೆದ ಎರಡು ದಿನಗಳ ಕೇಂದ್ರ ವ್ಯವಸ್ಥಾಪನಾ ಸಮಿತಿ ಸಭೆಯ ಮುಕ್ತಾಯದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಲವ್ ಜಿಹಾದ್ ಕುರಿತೂ ಚರ್ಚಿಸಲಾಯಿತು ಎಂದು ತಿಳಿಸಿದರು. ಸಭೆಯಲ್ಲಿ ಸಂಘಟನೆಯ 225 ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಗೋಕಳ್ಳರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗುಂಪು ಹತ್ಯೆಯ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಬನ್ಸಾಲ್, ಈ ರೀತಿಯ ಕೆಲವೇ ಘಟನೆಗಳು ನಡೆದಿವೆ. ಆದರೆ ಅದಕ್ಕೆ ನೈಜ ಕಾರಣ ಬೇರೆಯದೇ ಇದೆ ಎಂಬುದು ಬಳಿಕ ಗೊತ್ತಾಗಿದೆ ಎಂದರು.
ಅಂತರ್ಧರ್ಮೀಯ ಮದುವೆಗೆ ಅಭ್ಯಂತರವಿಲ್ಲ
'ವಿಭಿನ್ನ ಧರ್ಮಗಳ ಜೋಡಿ ಇಷ್ಟಪಟ್ಟು ಮದುವೆಯಾಗುವುದನ್ನು ನಾವು ಎಂದಿಗೂ ವಿರೋಧಿಸಿಲ್ಲ. ನಾವು ಬಲವಂತವಾಗಿ ಅಥವಾ ವಂಚಿಸಿ ನಡೆಸುವ 'ಲವ್ ಜಿಹಾದ್' ವಿರುದ್ಧವಾಗಿದ್ದೇವೆ. ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಹೋದರೆ ಅಂತರ್ ಧರ್ಮೀಯ ಮದುವೆಗೆ ನಮ್ಮ ಯಾವ ತಕರಾರೂ ಇರುವುದಿಲ್ಲ' ಎಂದರು.
ಪ್ರಾಣಿಗಳ ರಕ್ಷಣೆಗೆ ಸಚಿವಾಲಯ
ಗೋಹತ್ಯೆ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಪ್ರಾಣಿಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಜತೆಗೆ ಅಯೋಧ್ಯಾದಲ್ಲಿ ರಾಮಮಂದಿರವನ್ನು ಆದಷ್ಟು ಶೀಘ್ರದಲ್ಲಿಯೇ ನಿರ್ಮಿಸಬೇಕು ಎಂದೂ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಕೇರಳ: ಬಿಜೆಪಿ ಸೇರಿದ ಹಾದಿಯಾ ತಂದೆ ಅಶೋಕನ್
ಗೋರಕ್ಷಕರ ಮೇಲಿನ ದೌರ್ಜನ್ಯ
ಗೋರಕ್ಷಕರು ಸೇರಿದಂತೆ ಯಾರ ಮೇಲೆಯಾದರೂ ನಡೆಯುವ ಎಲ್ಲ ಹಿಂಸಾತ್ಮಕ ಘಟನೆಗಳನ್ನು ನಾವು ಖಂಡಿಸುತ್ತೇವೆ. ತಮ್ಮ ಪವಿತ್ರ ಪ್ರಾಣಿಯನ್ನು ರಕ್ಷಿಸುವ ಸಲುವಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಅನಿಸಿಕೆ ವ್ಯಕ್ತವಾದಾಗ ಗೋರಕ್ಷಕರೇ ರಸ್ತೆಗಿಳಿಯುತ್ತಾರೆ. ಆದರೆ, ಅವರ ವಿರುದ್ಧ ನಡೆಯುವ ದೌರ್ಜನ್ಯಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ದೇವಸ್ಥಾನಗಳ ಹಣ ಮಿಷನರಿಗಳಿಗೆ'
ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿನ ನಿರ್ವಹಣಾ ಸಮಿತಿಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಚರ್ಚಿಸಲಾಯಿತು. ದೇವಸ್ಥಾನಗಳ ಹಣವನ್ನು ಹೊರಕ್ಕೆ ರವಾನಿಸಿ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಸಹ ಚರ್ಚೆ ನಡೆಸಲಾಯಿತು. ಈ ಹಣವನ್ನು ಹಿಂದೂಗಳ ಕಲ್ಯಾಣಕ್ಕಾಗಿ ಮಾತ್ರವೇ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.