370ನೇ ವಿಧಿ ರದ್ದು ಪಡಿಸುವ ಆನ್ ಲೈನ್ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ
ಜಮ್ಮು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಅತ್ಯಂತ ಹಿಂದುಳಿದಿದೆ. ಇದಕ್ಕೆ 370ನೇ ವಿಧಿಯೇ ಕಾರಣ ಎಂದು ಈ ವಿಧಿ ರದ್ದುಪಡಿಸಲು ಸುಪ್ರೀಂಕೋರ್ಟಿನಲ್ಲಿ ಕಾನೂನು ಸಮರ ಮುಂದುವರೆದಿದೆ. ಈ ನಡುವೆ ಸಾವು ನೋವು ಹೆಚ್ಚಳಕ್ಕೆ ಕಾರಣವಾಗಿರುವ 370ನೇ ಪರಿಚ್ಛೇದ ರದ್ದುಪಡಿಸುವಂತೆ ಆನ್ ಲೈನ್ ನಲ್ಲಿ ಅಭಿಯಾನ ಆರಂಭಿಸಲಾಗಿದೆ.
ರಾಷ್ಟ್ರಪತಿಗಳನ್ನು ಉದ್ದೇಶಿಸಿ ಬರೆದಿರುವ ಈ ಅರ್ಜಿಗೆ ಮೊದಲಿಗೆ 2 ಲಕ್ಷ ಸಹಿಯನ್ನು ನಿರೀಕ್ಷಿಸಲಾಗಿತ್ತು. ಈಗ 3 ಲಕ್ಷ ಸಹಿಯ ಗುರಿಯನ್ನು ಹೊಂದಲಾಗಿದೆ. ಆಸಕ್ತರು, ಚೇಂಜ್. ಆರ್ಗ್ ನಲ್ಲಿರುವ 'ಕಾಂಪೈನ್ ಟು ಅಬಾಲಿಷ್ ಆರ್ಟಿಕಲ್ 370' ಅರ್ಜಿಗೆ ಸಹಿ ಹಾಕಬಹುದು.
ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ 9, 1947 ರಿಂದ ನವೆಂಬರ್ 26, 1949ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ 26, 1950ರಂದು ಜಾರಿಗೆ ಬಂದಿತು.
ವಿಶೇಷ ಸ್ಥಾನಮಾನ ನೀಡುವ 35ನೇ ಕಲಂ ಬಗ್ಗೆ ತಿಳಿಯಿರಿ
ಸಂವಿಧಾನದ 370ನೇ ಪರಿಚ್ಛೇದ ಜಾರಿ ಇರುವ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಳ್ಳುತ್ತವೆ.
ಕೆಲವು ಕ್ಷೇತ್ರಗಳ ನಿಯಮಗಳು ಅನ್ವಯವಾಗಲ್ಲ
ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಗಳನ್ನು ಆ ರಾಜ್ಯದಲ್ಲಿ ಜಾರಿಗೊಳಿಸಬೇಕಾದಲ್ಲಿ, ಅದಕ್ಕೆ ಆ ನಿರ್ದಿಷ್ಟ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯ. ಆದರೆ, ದೇಶದ ರಕ್ಷಣೆ, ವಿದೇಶಾಂಗ ವ್ಯವಹಾರ, ಮಾಹಿತಿ ಮತ್ತು ಪ್ರಸಾರ ಹಕ್ಕುಗಳ ಇಲಾಖೆಗಳ ನಿಯಮಗಳು ಮಾತ್ರ ಇತರೆ ರಾಜ್ಯಗಳಿಗೆ ಅನ್ವಯವಾಗುವಂತೆ 370 ಪರಿಚ್ಛೇದ ಅನ್ವಯವಾಗುವ ರಾಜ್ಯಕ್ಕೂ ನೇರವಾಗಿ ಅನ್ವಯವಾಗುತ್ತದೆ.
ಒಂದು ರಾಷ್ಟ್ರ, ಒಂದು ಸಂವಿಧಾನ ಪರಿಕಲ್ಪನೆಗೆ ಭಂಗ
ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ರಾಷ್ಟ್ರಗೀತೆ ಹಾಗೂ ಒಂದು ರಾಷ್ಟ್ರಧ್ವಜ ಎಂಬ ಪರಿಕಲ್ಪನೆಗೆ ವ್ಯತಿರಿಕ್ತವಾದ ಪರಿಸ್ಥಿತಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಬಹುದು. ಇತರೆ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಹಾಗೂ ಕಾಳಜಿ ಕಣಿವೆ ರಾಜ್ಯದ ಮೇಲೆ ಎಲ್ಲಾ ಸರ್ಕಾರಗಳು ನೀಡುತ್ತಾ ಬಂದರೂ ಅಲ್ಲಿನ ಪರಿಸ್ಥಿತಿ ಸುಧಾರಿಸಿಲ್ಲ. ತಾತ್ಕಾಲಿಕವಾಗಿ ಜಾರಿಗೆ ಬಂದ ಪರಿಚ್ಛೇದ 370(3) ರ ಅಗತ್ಯ ಈಗ ಇಲ್ಲ ಎಂದು ವಾದಿಸಲಾಗಿದೆ.
ಕಾಶ್ಮೀರಕ್ಕೆ ಲಾಭಕ್ಕಿಂತ ನಷ್ಟವೇ ಅಧಿಕವಾಗಿದೆ
ಜಮ್ಮು ಕಾಶ್ಮೀರದಲ್ಲಿ ಹೊರ ರಾಜ್ಯದ ಯಾರೂ ಆಸ್ತಿ ಹಾಗೂ ಭೂಮಿ ಖರೀದಿಸುವಂತಿಲ್ಲ. ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿದೆ. ಅಲ್ಲಿನವರಿಗೆ ಕೂಡ ತಾವು ಸಂಪೂರ್ಣ ಭಾರತೀಯರು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹೊರತಾಗಿ ಬೇರೆಯವರು ಬಂಡವಾಳ ತೊಡಗಿಸಲು ಅವಕಾಶವಿಲ್ಲದ ಕಾರಣ ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದಕ್ಕಾಗಿಯೇ ಸ್ಥಳೀಯರು ಶಸ್ತ್ರ ಕೈಗೆತ್ತಿಕೊಂಡು ಉಗ್ರರಾಗುತ್ತಿದ್ದಾರೆಂದು ವರದಿ ಹೇಳುತ್ತದೆ.
370ನೇ ವಿಧಿ ರದ್ದುಪಡಿಸುವ ಅಧಿಕಾರ ರಾಷ್ಟಪತಿಗಿದೆ
ಈ ನಿಬಂಧನೆಯು ಕೇವಲ ತಾತ್ಕಾಲಿಕವಾಗಿರುವ ಕಾರಣ ಯಾವುದೇ ಸಂದರ್ಭದಲ್ಲಿ ರದ್ದುಪಡಿಸಬಹುದು. ಈ ವಿಧಿ ರಚಿಸುವಾಗಲೇ ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಯಾವಾಗ ಬೇಕಾದರೂ ರದ್ದುಪಡಿಸಬಹುದೆಂದು ಸ್ಪಷ್ಟಪಡಿಸಲಾಗಿದೆ. ಭಾರತದ ರಾಷ್ಟ್ರಪತಿಯವರು ಒಂದು ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ರದ್ದುಪಡಿಸುವ ಅಧಿಕಾರ ಹೊಂದಿದ್ದಾರೆ.