370 ವಿಧಿ ರದ್ದುಗೊಳಿಸಿ 1 ವರ್ಷ: ಶ್ರೀನಗರದಲ್ಲಿ 2 ದಿನ ಕರ್ಫ್ಯೂ ಘೋಷಣೆ
ಶ್ರೀನಗರ, ಆಗಸ್ಟ್ 04: ಜಮ್ಮು ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದುಗೊಳಿಸಿ ನಾಳೆಗೆ ಒಂದು ವರ್ಷವಾಗಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಕರ್ಫ್ಯೂ ಘೋಷಿಸಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ನಾಳೆಗೆ ಒಂದು ವರ್ಷ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗದಿರುವಂತೆ ಮುಂಜಾಗ್ರತಾ ಕ್ರಮಗಳನ್ನು ಸ್ಥಳೀಯಾಡಳಿತ ತೆಗೆದುಕೊಂಡಿದೆ. ಆಗಸ್ಟ್ 3ರ ಸಂಜೆಯಿಂದ ಶ್ರೀನಗರದಲ್ಲಿ ಕರ್ಫ್ಯೂ ಚಾಲ್ತಿಯಲ್ಲಿದೆ.
ಉಳಿದೆಡೆ ಇಂದು ಮತ್ತು ನಾಳೆ ನಿರ್ಬಂಧಗಳು ಚಾಲ್ತಿಯಲ್ಲಿ ಇರಲಿವೆ. ಇದಲ್ಲದೆ, ಕೊವಿಡ್ 19 ಸಂಬಂಧ ಜಾರಿಯಲ್ಲಿರುವ ಎಲ್ಲ ನಿರ್ಬಂಧಗಳು ಮುಂದಿನ ಆದೇಶದ ವರೆಗೆ ಚಾಲ್ತಿಯಲ್ಲಿ ಇರುತ್ತವೆ. ಇದರಲ್ಲಿ ಸದ್ಯಕ್ಕೇನೂ ಬದಲಾವಣೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಶ್ರೀನಗರದಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಸೋಮವಾರದಿಂದಲೇ ಇದು ಜಾರಿಗೆ ಬಂದಿದ್ದು, ನಾಳೆ ರಾತ್ರಿವರೆಗೂ ಮುಂದುವರಿಯಲಿದೆ. ಇದಕ್ಕೂ ಮುನ್ನ ಪರಿಸ್ಥಿತಿ ಅವಲೋಕನಕ್ಕಾಗಿ ಸೇನೆಯ ಕೋರ್ಗ್ರೂಪ್ ಸಭೆ ನಡೆದಿತ್ತು.
2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ 370ನೇ ವಿಧಿಯ ಸವಲತ್ತನ್ನು ರದ್ದುಗೊಳಿಸುವ ತೀರ್ಮಾನವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿತ್ತು. ಅಲ್ಲದೆ, ಜಮ್ಮ-ಕಾಶ್ಮೀರ ಮತ್ತು ಲಡಾಖ್ ಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಿಸಿ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ಪಾಕಿಸ್ತಾನ ಪರ ಮತ್ತು ಪ್ರಾಯೋಜಿತ ಗುಂಪು, ಸಂಘಟನೆಗಳು ಆಗಸ್ಟ್ 5ರಂದು ಕಪ್ಪು ದಿನ ಆಚರಿಸುವುದಕ್ಕೆ ಸಿದ್ಧತೆ ನಡೆಸಿಕೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಅಹಿತಕರ ಘಟನೆ, ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಹಿಂಸಾಚಾರವೂ ನಡೆಯಲು ಬಿಡುವುದಿಲ್ಲ ಎಂದು ಶ್ರೀನಗರ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.