Breaking News: ಜಮ್ಮು-ಕಾಶ್ಮೀರ ಎನ್ಕೌಂಟರ್ನಲ್ಲಿ ಅಪರಿಚಿತ ಉಗ್ರನ ಹತ್ಯೆ
ಶ್ರೀನಗರ, ನವೆಂಬರ್ 11: ಜಮ್ಮು ಕಾಶ್ಮೀರ ಕುಲ್ಗಾಮ್ ಜಿಲ್ಲೆಯ ಚವಲ್ಗಾಮ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಅಪರಿಚಿತ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚವಲ್ಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಗುರುವಾರ ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲಾಯಿತು.
ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಒಬ್ಬ ಅಪರಿಚಿತ ಉಗ್ರ ಮೃತಪಟ್ಟಿದ್ದಾನೆ. ಮೃತ ಉಗ್ರರ ಗುರುತು ಮತ್ತು ಯಾವ ಸಂಘಟನೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಚವಲ್ಗಾಮ್ ಪ್ರದೇಶದಲ್ಲಿ ಕಾರ್ಯಾಚರಣೆ:
ಜಮ್ಮು ಕಾಶ್ಮೀರ ಕುಲ್ಗಾಮ್ ಜಿಲ್ಲೆಯ ಚವಲ್ಗಾಮ್ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಪಡೆ ಸಿಬ್ಬಂದಿ ಫುಲ್ ಅಲರ್ಟ್ ಆಗಿದ್ದಾರೆ. ಉಗ್ರನನ್ನು ಹೊಡೆದುರುಳಿಸಲಾದ ಪ್ರದೇಶದ ಸುತ್ತಮುತ್ತಲಿನಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂರು ದಿನದ ಹಿಂದೆ ಎರಡು ಹತ್ಯೆ:
ಕಳೆದ ನವೆಂಬರ್ 8ರ ಸೋಮವಾರ ಶ್ರೀನಗರದ ಬೋಹ್ರಿ ಕಡಲ್ ಎಂಬ ಪ್ರದೇಶದಲ್ಲಿ ರಾತ್ರಿ 8.10 ಗಂಟೆ ಸುಮಾರಿಗೆ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಅಂಗಡಿಯ ಸೇಲ್ಸ್ ಮ್ಯಾನ್ ಮೊಹಮ್ಮದ್ ಇಬ್ರಾಹಿಂ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಇರುವ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಸರಣಿ ದಾಳಿಗಳನ್ನು ನಡೆಸಿದ್ದರು. ಅಕ್ಟೋಬರ್ ತಿಂಗಳ ಆರಂಭದಲ್ಲೇ ನಡೆಸಿದ ಎರಡು-ಮೂರು ದಾಳಿಗಳಲ್ಲಿ ಐದಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಕೊಂದು ಹಾಕಲಾಗಿತ್ತು. ಅದಾದ ನಂತರ ಮೊದಲ ಬಾರಿಗೆ ಉಗ್ರರು ಮತ್ತೊಮ್ಮೆ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ನವೆಂಬರ್ 5ರಂದು ಸಾರ್ವಜನಿಕ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಶುಕ್ರವಾರ ನಡೆದಿರುವ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಉಗ್ರರ ಮತ್ತಷ್ಟು ಉದ್ದೇಶಿತ ದಾಳಿಗಳನ್ನು ತಡೆಯಲು ಶ್ರೀನಗರದಲ್ಲಿ ಹೆಚ್ಚುವರಿ 50 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.