ಪಾಕ್ ಆಡಳಿತದಲ್ಲಿರುವ ಹಿಂದೂಗಳ ಶ್ರದ್ಧಾ ಕೇಂದ್ರಕ್ಕೂ ಪ್ರವೇಶ: ಮುಫ್ತಿ ಸ್ವಾಗತ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ನವೆಂಬರ್ 29: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠ ಸೇರಿದಂತೆ ಪಾಕಿಸ್ತಾನದಲ್ಲಿರುವ ಇನ್ನಷ್ಟು ಶ್ರದ್ಧಾ ಕೇಂದ್ರಗಳಿಗೆ ಭಾರತದಿಂದ ಭಕ್ತರು ಭೇಟಿ ನೀಡಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಮಾಡಿರುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈ ರೀತಿಯಾಗಿ ಶಾಂತಿ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ಕ್ರಮ. ಕಾಶ್ಮೀರದಲ್ಲಿ ಶಾರದಾ ಪೀಠ ಪ್ರವೇಶಕ್ಕೆ, ಕಟಸ್ ರಾಜ್ ಮತ್ತಿತರ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ನೀಡುವ ಬಗ್ಗೆ ಇಮ್ರಾನ್ ಖಾನ್ ನೀಡಿರುವ ಪ್ರಸ್ತಾವವನ್ನು ನರೇಂದ್ರ ಮೋದಿ ಜೀ ಅವರು ಪರಿಗಣನೆ ಮಾಡಬೇಕು ಎಂದಿದ್ದಾರೆ.
ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ
ಕಾಶ್ಮೀರದಲ್ಲಿರುವ ಶಾರದಾ ಪೀಠ, ಕಟಸ್ ರಾಜ್ ಮತ್ತಿತರ ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಭಾರತೀಯರು ಭೇಟಿ ನೀಡಲು ಇಟ್ಟಿರುವ ಪ್ರಸ್ತಾವವನ್ನು ನಾವು ಪರಿಗಣಿಸಬಹುದು ಎಂದು ಪತ್ರಕರ್ತರ ಜತೆಗೆ ನಡೆಸಿದ ಸಂವಾದದ ವೇಳೆ ಇಮ್ರಾನ್ ಖಾನ್ ಹೇಳಿದ್ದರು. ಆ ನಂತರ ಮುಫ್ತಿ ಪತ್ರಿಕಾ ಹೇಳಿಕೆ ನೀಡಿ, ಈ ಪ್ರಸ್ತಾವಕ್ಕೆ ಕೇಂದ್ರ ಸರಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎಂಬ ನಂಬಿಕೆ ನಮ್ಮ ಪಕ್ಷಕ್ಕೆ ಇದೆ ಎಂದಿದ್ದಾರೆ.
ಈ ಪ್ರಕ್ರಿಯೆಗೆ ಸ್ವತಃ ಪ್ರಧಾನಮಂತ್ರಿಗಳು ಮುಂದಾಳತ್ವ ವಹಿಸಬೇಕು. ಹಾಗಾದಾಗ ಶಾಂತಿಯ ವಾತಾವರಣ ಕದಡುವ ಪ್ರಯತ್ನಗಳಿಗೆ ಅವಕಾಶ ಇಲ್ಲದಂತಾಗಿದೆ. ಇಂಥ ಕ್ರಮಗಳ ಮೂಲಕ ಶಾಂತಿ ಸ್ಥಾಪನೆ ಪ್ರಸ್ತಾವ ಬಂದಾಗ ಅವುಗಳನ್ನು ಮೆಚ್ಚಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಮೆಹಬೂಬಾ ಮುಫ್ತಿ ಸಯೀದ್.