ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
ಶ್ರೀನಗರ, ಮಾರ್ಚ್ 07: ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳ ಕಾಶ್ಮೀರವಾಗಿ ಬದಲಾಗುತ್ತದೆ ಎಂಬ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿಕೆಗೆ ತಿರುಗೇಟು ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, "ಪಶ್ಚಿಮ ಬಂಗಾಳ ಕಾಶ್ಮೀರವಾಗಿ ಬದಲಾಗುವುದರಲ್ಲಿ ಏನಾದರೂ ತಪ್ಪಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಸುವೇಂದು ಅಧಿಕಾರಿ ಹೇಳಿಕೆಯನ್ನು ಮೂರ್ಖತನ ಎಂದಿರುವ ಒಮರ್, 2019ರ ಆಗಸ್ಟ್ನಲ್ಲಿ 370ನೇ ವಿಧಿ ರದ್ದತಿ ನಂತರ ಕಾಶ್ಮೀರ ಸ್ವರ್ಗವಾಗಿದೆ ಎಂದು ಬಿಜೆಪಿಯೇ ಹೇಳಿಕೊಂಡಿತ್ತಲ್ಲವೇ ಎಂದಿದ್ದಾರೆ.
ಮಮತಾರನ್ನು ನಂದಿಗ್ರಾಮದಲ್ಲಿ ಸುಲಭವಾಗಿ ಸೋಲಿಸುವೆ ಎಂದ ಸುವೇಂದು
"ನಿಮ್ಮ ಪ್ರಕಾರ 2019ರ ಆಗಸ್ಟ್ ನಂತರ ಕಾಶ್ಮೀರ ಸ್ವರ್ಗವಾಗಿದೆ. ಹೀಗಿದ್ದಾಗ ಪಶ್ಚಿಮ ಬಂಗಾಳ ಕಾಶ್ಮೀರವಾಗುವುದರಲ್ಲಿ ತಪ್ಪೇನಿದೆ? ಬಂಗಾಳಿಗಳಿಗೆ ಕಾಶ್ಮೀರವೆಂದರೆ ಇಷ್ಟ. ಇಲ್ಲಿಗೆ ಬಂಗಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಾಗಿ ನಿಮ್ಮ ಮೂರ್ಖತನವನ್ನು, ಈ ಹೇಳಿಕೆಯನ್ನು ಕ್ಷಮಿಸಿ ಬಿಡುತ್ತೇವೆ" ಎಂದು ಹೇಳಿದ್ದಾರೆ.
ಮಾರ್ಚ್ 27ರಿಂದ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ನಂದಿಗ್ರಾಮದಿಂದ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಶನಿವಾರ ಚುನಾವಣಾ ಮೆರವಣಿಗೆಯಲ್ಲಿ ಟಿಎಂಸಿ ವಿರುದ್ಧ ಮಾತನಾಡಿದ್ದ ಸುವೇಂದು, "ಶ್ಯಾಮ ಪ್ರಸಾದ್ ಮುಖರ್ಜಿ ಇಲ್ಲದೇ ಇದ್ದಿದ್ದರೆ, ಈ ದೇಶ ಇಸ್ಲಾಂ ದೇಶವಾಗುತ್ತಿತ್ತು. ಬಾಂಗ್ಲಾದೇಶದಲ್ಲಿ ನಾವು ಬದುಕಬೇಕಿತ್ತು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳ ಕಾಶ್ಮೀರವಾಗುತ್ತದೆ" ಎಂದು ಹೇಳಿಕೆ ನೀಡಿದ್ದರು.