'ಬಂದೂಕು, ಭಯೋತ್ಪಾದನೆ, ಭಯಕ್ಕೆ ಪುನರ್ಜನ್ಮ ನೀಡಿದ್ದೇ ಬಿಜೆಪಿ'
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 15: ಬಿಜೆಪಿಯು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಪಿ) ಮತ್ತು ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಜತೆ ಮೈತ್ರಿ ಮಾಡಿಕೊಂಡಿದ್ದ ಕಾರ್ಯ ಸೂಚಿಯೇ (ಅಜೆಂಡಾ) ಬಂದೂಕು, ಭಯೋತ್ಪಾದನೆ, ಭಯ ಹಾಗೂ ಆತಂಕಕ್ಕೆ ಜಮ್ಮು-ಕಾಶ್ಮೀರದಲ್ಲಿ ಪುನರ್ಜನ್ಮ ನೀಡುವುದಾಗಿತ್ತು ಎಂದು ಸೋಮವಾರ ಮಾಜಿ ಮುಖ್ಯಮುಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಪಿಡಿಪಿ ಹಾಗೂ ಪಿಸಿಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಮಾಡಿದ ಸಾಧನೆ ಏನು ಎಂದು ಪ್ರಧಾನಮಂತ್ರಿಗಳನ್ನು ಕೇಳಲು ಬಯಸುತ್ತೇನೆ. ನೀವು ಕೊಟ್ಟಿದ್ದು ಏನೆಂದರೆ, ಬಂದೂಕುಗಳು, ಭಯೋತ್ಪಾದನೆ, ದಾಳಿಗಳು, ಭಯ ಮತ್ತು ಆತಂಕಕ್ಕೆ ಪುನರ್ಜನ್ಮ ಎಂದು ಆವರು ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪರಿಸ್ಥಿತಿಯನ್ನು ನೋಡಿ. ಒಂದು ವೇಳೆ ಪರಿಚ್ಛೇದ 370A ಮೇಲೆ ದಾಳಿ ನಡೆಸಿದರೆ, ಪರಿಚ್ಛೇದ 35A ದುರ್ಬಲಗೊಳಿಸಿದರೆ, ಅದಕ್ಕೆ ಬಿಜೆಪಿ, ಪಿಡಿಪಿ ಹಾಗೂ ಪಿಸಿ ಮಧ್ಯದಮೈತ್ರಿ ಕಾರ್ಯಸೂಚಿಯೇ ಕಾರಣ. ನ್ಯಾಷನಲ್ ಕಾನ್ಫರೆನ್ಸ್ ನಿಂದ ವಿಧಾನಸಭೆಯಲ್ಲಿ 35A ರಕ್ಷಿಸಿಕೊಳ್ಳಬೇಕು ಎಂದು ಹೇಳುವವರೆಗೆ ಮೆಹಬೂಬಾ ಮುಫ್ತಿ 35A ಎಂದರೇನು ಅಂತ ಕೇಳಿರಲಿಲ್ಲ ಎಂದಿದ್ದಾರೆ ಒಮರ್ ಅಬ್ದುಲ್ಲಾ.
ಕಣಿವೆ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಇಲ್ಲ, ಮೋದಿ ವಿರುದ್ಧ ಆಕ್ರೋಶ
ದೊಡ್ಡ ಸಂಖ್ಯೆಯಲ್ಲಿ ಬಂಕರ್ ಗಳನ್ನು ನಿರ್ಮಿಸಿದ್ದಕ್ಕೆ ಬಿಜೆಪಿ ವಿರುದ್ಧ ಟೀಕೆ ಮಾಡಿದ ಅವರು, ನನ್ನ ಆಡಳಿತಾವಧಿಯಲ್ಲಿ ನಲವತ್ತು ಬಂಕರ್ ಗಳನ್ನು ತೆಗೆದೆವು. ಆದರೆ ಅವರು ಆಡಳಿತಾವಧಿಯಲ್ಲಿ ಎರಡಂತಸ್ತಿನ ಬಂಕರ್ ಗಳನ್ನು ನಿರ್ಮಿಸಿದರು ಎಂದು ಹೇಳಿದ್ದಾರೆ.
ನಾಲ್ಕು ವರ್ಷದ ಹಿಂದೆ ಮಾಡಿದ್ದೇನು?
ಒಮರ್ ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬದ ನಿರ್ಗಮನದ ನಂತರವೇ ಜಮ್ಮು-ಕಾಶ್ಮೀರದ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ಪ್ರಧಾನಿ ಮೋದಿ ಮಾತಿಗೆ ಉತ್ತರಿಸಿದ ಅವರು, ಜನರು ಬಿಜೆಪಿಯನ್ನು ಆರಿಸಿದರೆ ಈ ಎರಡು ಕುಟುಂಬವನ್ನು ಮುಗಿಸುವುದಾಗಿ ನೀವು ಹೇಳಿದ್ದಿರಿ. ನಾಲ್ಕು ವರ್ಷದ ಹಿಂದೆ ಮಾಡಿದ್ದೇನು? ಎರಡರಲ್ಲಿ ಒಂದು ಕುಟುಂಬವನ್ನು ಸ್ವಾಗತಿಸಿದಿರಿ ಎಂದು ತಿವಿದಿದ್ದಾರೆ.
ಅದೇ ಕುಟುಂಬದಿಂದ ಇಬ್ಬರನ್ನು ಮುಖ್ಯಮಂತ್ರಿ ಮಾಡಿದಿರಿ
ಕೊಟ್ಟ ಮಾತನ್ನು ಮರೆತುಹೋಗುವ ಜನರ ಪೈಕಿ ನಾವಲ್ಲ. ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ. ಆದರೆ ಅದೇ ಕುಟುಂಬದಿಂದ ನೀವು ಇಬ್ಬರನ್ನು ಮುಖ್ಯಮಂತ್ರಿ(ಪಿಡಿಪಿಯಿಂದ ಮೆಹಬೂಬಾ ಮುಫ್ತಿ ಹಾಗೂ ಆಕೆಯ ತಂದೆ) ಮಾಡಿದಿರಿ. ರಾಜ್ಯಕ್ಕೆ ಏನೂ ನೀಡದವರಿಂದ ಏನನ್ನು ನಿರೀಕ್ಷೆ ಮಾಡ್ತೀರಿ? ಅದು ಕಮಲ ಇರಲಿ ಮತ್ತೊಂದು ಇರಲಿ ಎಲ್ಲವೂ ಒಂದೇ ಎಂದು ಒಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.
ಹದಿನೆಂಟು ರುಪಾಯಿ ಜಿಎಸ್ ಟಿ ಕಡಿತದ ಲೆಕ್ಕ
ಜಿಎಸ್ ಟಿ ಜಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜನರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಗೆ ಅಂಗಡಿಗೆ ಹೋದರೆ, ಅದರಲ್ಲಿ ಹದಿನೆಂಟು ರುಪಾಯಿ ಕಡಿತವಾದರೆ, ಒಂಬತ್ತು ರುಪಾಯಿ ಮೋದಿ ಖಜಾನೆಗೆ, ಒಂಬತ್ತು ರುಪಾಯಿ ಮುಫ್ತಿಗೆ ಹೋಗುತ್ತಿತ್ತು. ಈಗ ಮಲಿಕ್ ಗೆ (ರಾಜ್ಯಪಾಲರಿಗೆ) ಹೋಗುತ್ತಿದೆ ಎಂದಿದ್ದಾರೆ.
ಮೂರು ತಲೆಮಾರಿನ ಜೀವನ ನಾಶ
ಕತುವಾದಲ್ಲಿ ಭಾನುವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬ ಜಮ್ಮು ಮತ್ತು ಕಾಶ್ಮೀರದ ಮೂರು ತಲೆಮಾರಿನ ಜೀವನವನ್ನು ನಾಶ ಮಾಡಿದೆ. ಅವರ ನಿರ್ಗಮನವಾದರೆ ರಾಜ್ಯಕ್ಕೆ ಉಜ್ವಲವಾದ ಭವಿಷ್ಯ ದೊರೆಯಬಹುದು ಎಂದು ಹೇಳಿದ್ದರು.