ಉಗ್ರರು ನನ್ನ ಅವಧಿಯಲ್ಲಿ ಶ್ರೀನಗರ್ ಆಸುಪಾಸಿಗೂ ನುಸುಳಿರಲಿಲ್ಲ: ಸತ್ಯಪಾಲ್ ಮಲ್ಲಿಕ್
ಶ್ರೀನಗರ್, ಅಕ್ಟೋಬರ್ 18: "ಜಮ್ಮು ಕಾಶ್ಮೀರದಲ್ಲಿ ತಾವು ರಾಜ್ಯಪಾಲರಾಗಿದ್ದ ವೇಳೆ ಶ್ರೀನಗರ್ ಸುತ್ತಮುತ್ತಲಿನ 50 ರಿಂದ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಉಗ್ರರು ನುಸುಳುವುದಕ್ಕೆ ಸಾಧ್ಯವಿರಲಿಲ್ಲ," ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
"ನನ್ನ ಅಧಿಕಾರ ಅವಧಿಯಲ್ಲಿ ಶ್ರೀನಗರ್ ಸುತ್ತಲಿನ 50 ರಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಉಗ್ರರು ನುಸುವುದಕ್ಕೆ ಅವಕಾಶವಿರಲಿಲ್ಲ. ಆದರೆ ಈಗ ಶ್ರೀನಗರ್ ದಲ್ಲಿ ಉಗ್ರರು ಅಮಾಯಕರನ್ನು ಗುಂಡಿಕ್ಕಿ ಕೊಂದು ಹಾಕುತ್ತಿದ್ದಾರೆ," ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮತ್ತಿಬ್ಬರು ಬಿಹಾರಿ ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ
ಕಳೆದ ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸತ್ಯಪಾಲ್ ಮಲ್ಲಿಕ್ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಪ್ರದೇಶವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಆಗಸ್ಟ್ 2019ರಲ್ಲಿ ತೆಗೆದುಕೊಳ್ಳಲಾಯಿತು.
ಮೇಘಾಲಯ ರಾಜ್ಯಪಾಲರಾಗಿ ಸತ್ಯಪಾಲ್ ಮಲ್ಲಿಕ್:
ಕಳೆದ ನವೆಂಬರ್ 2019 ರಿಂದ ಆಗಸ್ಟ್ 18, 2020ರವರೆಗೆ ಸತ್ಯಪಾಲ್ ಮಲ್ಲಿಕ್ ಗೋವಾ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೇಘಾಲಯದ ರಾಜ್ಯಪಾಲರಾಗಿ ಆಗಸ್ಟ್ 20, 2020ರಂದು ಸತ್ಯಪಾಲ್ ಮಲ್ಲಿಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಳೆದ 18 ದಿನಗಳಲ್ಲಿ 11 ನಾಗರಿಕರ ಹತ್ಯೆ:
ಕಣಿವೆ ರಾಜ್ಯವನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಭಯೋತ್ಪಾದಕ ಸಂಘಟನೆಗಳು ಭಯ ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲೇ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕಡೆ ಉಗ್ರರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದಾರೆ. ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿ ಹೊಡೆದುರುಳಿಸಲಾಗಿದೆ.
ಜಮ್ಮು ಕಾಶ್ಮೀರ ನಾಗರಿಕರ ಹತ್ಯೆ ಹಿಂದೆ ಐಎಸ್ಐ:
ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸೆಪ್ಟೆಂಬರ್ 13ರಂದು ಉಗ್ರರು, ಸೇನೆ ಹಾಗೂ ಭಯೋತ್ಪಾದಕರೊಂದಿಗೆ ಸಭೆ ನಡೆಸಿದ ಐಎಸ್ಐ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ 200 ಜನರ "ಹಿಟ್-ಲಿಸ್ಟ್" ಮಾಡಿದೆ. ಭಾರತೀಯ ಸರ್ಕಾರಕ್ಕೆ ಹತ್ತಿರವಿರುವ ಮಾಧ್ಯಮ ಸಿಬ್ಬಂದಿ ಮತ್ತು ಭಾರತೀಯ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಮೂಲಗಳು ಮತ್ತು ಮಾಹಿತಿದಾರರನ್ನು ಹೊರತುಪಡಿಸಿ, ವಲಸೆ ಕಾರ್ಮಿಕರು, ಪಂಡಿತರು ಹಾಗೂ ಕಾಶ್ಮೀರಕ್ಕೆ ಅವರನ್ನು ಹಿಂದಿರುಗಿಸಲು ಸಕ್ರಿಯವಾಗಿ ಶ್ರಮಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರ ಹೆಸರನ್ನು ಸೇರಿಸಲಾಗಿದೆ.
ಕಾಶ್ಮೀರ ತೊರೆಯುತ್ತಿರುವ ವಲಸೆ ಕಾರ್ಮಿಕರು, ಪಂಡಿತರು:
ಕಾಶ್ಮೀರದಲ್ಲಿ ಗುರಿಯಾಗಿಸಿಕೊಂಡು ನಡೆಯುತ್ತಿರುವ ನಾಗರಿಕ ಹತ್ಯೆಗಳಿಂದ ಒಂದು ವಾರದ ಹಿಂದೆ ಕಳೆದ ಹಲವು ಶಿಬಿರಗಳಲ್ಲಿ ವಾಸಿಸುತ್ತಿದ್ದ ಹಲವಾರು ಕಾಶ್ಮೀರಿ ಪಂಡಿತರು ರಾಜ್ಯ ತೊರೆಯುವುದಕ್ಕೆ ಪ್ರಮುಖ ಕಾರಣವಾಯಿತು. ಹತ್ತಾರು ಕುಟುಂಬಗಳು - ಕಾಶ್ಮೀರಿ ವಲಸಿಗರಿಗೆ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಯೋಜನೆಯಡಿ ಕೆಲಸ ನೀಡಿದ ನಂತರ ಕಣಿವೆಗೆ ಮರಳಿದ ಅನೇಕ ಸರ್ಕಾರಿ ಉದ್ಯೋಗಿಗಳು ಸದ್ದಿಲ್ಲದೆ ಜಮ್ಮು ಕಾಶ್ಮೀರವನ್ನು ತೊರೆಯುತ್ತಿದ್ದಾರೆ.