ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಜೈಲುಗಳಲ್ಲಿ ಅಪ್ರಾಪ್ತರೇ ಇಲ್ಲ
ಶ್ರೀನಗರ್, ಡಿಸೆಂಬರ್.13: ಜಮ್ಮು-ಕಾಶ್ಮೀರದಲ್ಲಿ ಅಪ್ರಾಪ್ತರನ್ನೂ ಕೂಡಾ ಸೆರೆ ಹಿಡಿದು ಜೈಲಿನಲ್ಲಿ ಇಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದೇಶದ ಸುಪ್ರೀಂಕೋರ್ಟ್ ಗೂ ಸಾಲು ಸಾಲು ದೂರುಗಳ ದಾಖಲಾಗಿದ್ದವು. ಈಗ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ. ಎಲ್ಲ ಪ್ರಶ್ನೆ ಹಾಗೂ ಅನುಮಾನಗಳಿಗೂ ಉತ್ತರ ಸಿಕ್ಕಿದೆ.
ಜಮ್ಮು-ಕಾಶ್ಮೀರದ ಜೈಲುಗಳಲ್ಲಿ ಅಪ್ರಾಪ್ತರನ್ನು ಇರಿಸಿಲ್ಲ ಎಂಬುದನ್ನು ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಈ ಕುರಿತು ತಯಾರಿಸಿದ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದೆ.
ಕಾಶ್ಮೀರದ ಸ್ಥಿತಿ ಸುಧಾರಿಸಿದೆ, ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ!
ಕಣಿವೆ ರಾಜ್ಯಕ್ಕೆ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಕೇಂದ್ರ ಸರ್ಕಾರದ ವಿರುದ್ಧ ಕೆಲವು ಸಂಘಟನೆಗಳು ಹಾಗೂ ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಉದ್ರಿಕ್ತರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು.
ಅಪ್ರಾಪ್ತರನ್ನೂ ಸೆರೆ ಹಿಡಿದ ಆರೋಪ ಸುಳ್ಳು:
ಕಣಿವೆ ರಾಜ್ಯದಲ್ಲಿ ಶಾಂತಿ ಕದಡದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನಾ ತುಕಡಿಗಳು, ಪೊಲೀಸರು ತೀವ್ರ ಮುಂಜಾಗ್ರತೆ ವಹಿಸಿದ್ದರು. ಈ ವೇಳೆ ದುಷ್ಕೃತ್ಯ ಎಸಗುವವವರ ಬಗ್ಗೆ ನಿಗಾ ವಹಿಸಿದ್ದು, ಶಂಕಿತರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕೆಲವು ಅಪ್ರಾಪ್ತರನ್ನೂ ಕೂಡಾ ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್, ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಾಧೀಶರಿಗೆ ಸೂಚನೆ ನೀಡಿತ್ತು.
ಡಿಸೆಂಬರ್.13ರ ಶುಕ್ರವಾರ ಜಮ್ಮು-ಕಾಶ್ಮೀರದ ಜೈಲಿಗಳಿಗೆ ಭೇಟಿ ನೀಡಿದ ಹೈಕೋರ್ಟ್ ನ ನಾಲ್ವರು ನ್ಯಾಯಾಧೀಶರು ಈ ಬಗ್ಗೆ ಪರಿಶೀಲನೆ ನಡೆಸಿದರು. ಅಂತಿಮವಾಗಿ ಯಾವುದೇ ಅಪ್ರಾಪ್ತರನ್ನು ಜೈಲಿನಲ್ಲಿ ಸೆರೆ ಹಿಡಿಯಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.