ಉಗ್ರರಿಗೆ ಹಣಕಾಸು ನೆರವು; ಪ್ರತ್ಯೇಕತಾವಾದಿಗಳ ಮನೆಗಳಲ್ಲಿ ಶೋಧ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 26: ಉಗ್ರಗಾಮಿಗಳಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಕಾಶ್ಮೀರ ಕಣಿವೆಯಲ್ಲಿ ಮಿರ್ವೈಜ್ ಉಮರ್ ಫಾರೂಕ್ ಸೇರಿದಂತೆ ಪ್ರತ್ಯೇಕತಾವಾದಿಗಳ ಶೋಧ ಕಾರ್ಯಾಚರಣೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಿದೆ.
ಶ್ರೀನಗರ್ ನ ಹಲವು ಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಶೋಧ ಕಾರ್ಯಾಚರಣೆ ನಡೆಸುವ ಮುನ್ನ ಆ ಪ್ರದೇಶಗಳನ್ನು ಸ್ಥಳೀಯ ಪೊಲೀಸರು ಹಾಗೂ ಸಿಆರ್ ಪಿಎಫ್ ಸಿಬ್ಬಂದಿ ಸುತ್ತುವರಿದಿದ್ದಾರೆ. ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಮಗ ನಯೀಮ್ ಗೀಲಾನಿ ಮನೆ, ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ ಎಫ್) ನಾಯಕ ಯಾಸಿನ್ ಮಲಿಕ್, ಶಬೀರ್ ಷಾ, ಅಶ್ರಫ್ ಸೆಹ್ರೈ ಹಾಗೂ ಜಾಫರ್ ಮನೆಗಳಲ್ಲಿ ಶೋಧ ನಡೆದಿದೆ.
ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎನ್ ಐಎ
ಕಳೆದ ಶುಕ್ರವಾರದಿಂದ ಮಲಿಕ್ ನನ್ನು ವಶದಲ್ಲಿ ಇರಿಸಿಕೊಳ್ಳಲಾಗಿದೆ. ಇನ್ನು ಶಬೀರ್ ಷಾ 2017ರ ಜುಲೈನಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಇದ್ದಾನೆ. ಪುಲ್ವಾಮಾದಲ್ಲಿನ ಉಗ್ರರ ದಾಳಿಯ ನಂತರ ವಾರದ ಹಿಂದಷ್ಟೇ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರಕಾರ ಹಿಂಪಡೆದಿತ್ತು. ಕಳೆದ ವಾರದ ಕೊನೆಗೆ ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಯನು ಕಾಶ್ಮೀರದಲ್ಲಿ ನಿಯೋಜಿಸಲಾಗಿದ್ದು, ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳ ಮೇಲೆ ಕ್ರಮಕ್ಕೆ ಇಂಥ ತೀರ್ಮಾನ ಕೈಗೊಳ್ಳಲಾಗಿದೆ.