ಶ್ರೀನಗರ ಎನ್ಕೌಂಟರ್ನಲ್ಲಿ ಹತ್ಯೆಯಾದವನು ನನ್ನ ಮಗ ಭಯೋತ್ಪಾದಕನಲ್ಲ: ಉಗ್ರರ ವಿರೋಧಿ ಹೋರಾಟಗಾರ
ಶ್ರೀನಗರ, ನವೆಂಬರ್ 17: ಶ್ರೀನಗರದಲ್ಲಿ ನಡೆದ ವಿವಾದಾತ್ಮಕ ಎನ್ಕೌಂಟರ್ನಲ್ಲಿ ಪೊಲೀಸರಿಂದ ಹತ್ಯೆಗೀಡಾದ ಮತ್ತು ಭಯೋತ್ಪಾದಕರು ಎಂದು ಹೆಸರಿಸಲ್ಪಟ್ಟ ನಾಲ್ವರಲ್ಲಿ ಒಬ್ಬ ತನ್ನ ಮಗ ಎಂದು ಭಯೋತ್ಪಾದನಾ ವಿರೋಧಿ ಹೋರಾಟಗಾರ ಅಬ್ದುಲ್ ಲತೀಫ್ ಮ್ಯಾಗ್ರೆ ಹೇಳಿದ್ದಾರೆ.
2005ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭಯೋತ್ಪಾದಕನನ್ನು ಕಲ್ಲಿನಿಂದ ಹೊಡೆದು ಕೊಂದು ಹೆಸರಾಗಿದ್ದ ಅಬ್ದುಲ್ ಲತೀಫ್ ಮ್ಯಾಗ್ರೆ (Abdul Latief Magray) ಈ ಹೇಳಿಕೆಯನ್ನು ನೀಡಿದ್ದಾರೆ. 2005 ರಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ಅಬ್ದುಲ್ ಲತೀಫ್ ಮ್ಯಾಗ್ರೆ ಸೈನ್ಯದಿಂದ ಮೆಚ್ಚುಗೆ ಪತ್ರವನ್ನು ಪಡೆದಿದ್ದಾರೆ. ಸೋಮವಾರ ತಡರಾತ್ರಿ ಶ್ರೀನಗರದ ವಾಣಿಜ್ಯ ಸಂಕೀರ್ಣದೊಳಗೆ ನಡೆದ ಎನ್ಕೌಂಟರ್ನಲ್ಲಿ ಅಬ್ದುಲ್ ಲತೀಫ್ ಮ್ಯಾಗ್ರೆ ಅವರ ಪುತ್ರ 24 ವರ್ಷದ ಅಮೀರ್ ಮ್ಯಾಗ್ರೆ ಭಯೋತ್ಪಾದಕ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅಮೀರ್ ಮ್ಯಾಗ್ರೆ ಭಯೋತ್ಪಾದಕನಲ್ಲ, ಆತನನ್ನು ಭಯೋತ್ಪಾದಕನೆಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆಂದು ಅಬ್ದುಲ್ ಲತೀಫ್ ಮ್ಯಾಗ್ರೆ ಆರೋಪಿಸಿದ್ದಾರೆ.
"ನಾನೇ 2005ರಲ್ಲಿ ಭಯೋತ್ಪಾದಕರನ್ನು ಕಲ್ಲಿನಿಂದ ಹೊಡೆದು ಕೊಂದಿದ್ದೇನೆ. ಭಯೋತ್ಪಾದಕರ ಗುಂಡುಗಳೊಂದಿಗೆ ಹೋರಾಡಿದ್ದೇನೆ. ಭಯೋತ್ಪಾದಕರನ್ನು ಕಲ್ಲಿನಿಂದ ಕೊಂದ ಭಾರತೀಯನ ಈ ತ್ಯಾಗದ ಫಲಕ್ಕೆ ಇಂದು ನನ್ನ ಮಗನನ್ನು ಕೊಂದು ಭಯೋತ್ಪಾದಕ ಎಂದು ಬಿಂಬಿಸಲಾಗುತ್ತಿದೆ" ಎಂದು ಅಬ್ದುಲ್ ಲತೀಫ್ ಮ್ಯಾಗ್ರೆ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ನನ್ನ ಸೋದರಸಂಬಂಧಿ ಉಗ್ರಗಾಮಿಗಳಿಂದ ಕೊಲ್ಲಲ್ಪಟ್ಟಿದ್ದಾನೆ. 11 ವರ್ಷಗಳ ಹಿಂದೇ ನಾವು ನಮ್ಮ ಮನೆಯಿಂದ ವಲಸೆ ಹೋಗಬೇಕಾಗಿತ್ತು. ನಾನು ನನ್ನ ಮಕ್ಕಳನ್ನು ಬಹಳ ಕಷ್ಟದಿಂದ ಸಾಕಿದ್ದೇನೆ. ತನ್ನ ಮಗ ಅಮೀರ್ ಮುಗ್ಧ. ಶ್ರೀನಗರದ ಅಂಗಡಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಆತನನ್ನು ಕೊಂದು ಭಯೋತ್ಪಾಕ ಎಂದು ಹೇಳಲಾಗುತ್ತಿದೆ. ನಿಜವಾಗಲೂ ನನ್ನ ಮಗ ಮುಗ್ಧ. ಆತ ಭಯೋತ್ಪಾದಕನಲ್ಲ ಎಂದು ಮ್ಯಾಗ್ರೆ ಹೇಳಿದ್ದಾರೆ.
ಮಾತ್ರವಲ್ಲದೆ ಮಗನ ಅಂತಿಮ ಸಂಸ್ಕಾರಕ್ಕಾಗಿ ಆತನ ಮೃತದೇಹವನ್ನು ಹಿಂದಿರುಗಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಮ್ಯಾಗ್ರೆ ಹೇಳಿದ್ದಾರೆ. "ನನ್ನ ಮಗನ ಶವವನ್ನು ನಿರಾಕರಿಸುವುದು ಭಯೋತ್ಪಾದಕರ ವಿರುದ್ಧದ ಹೋರಾಟದ ಪ್ರತಿಫಲವಾಗಿದೆ. ನನ್ನ ಮನೆಗೆ ಇನ್ನೂ ಪೋಲಿಸ್ ಕಾವಲು ಇದೆ. ನಾಳೆ ಭದ್ರತಾ ಸಿಬ್ಬಂದಿ ನನ್ನನ್ನು ಕೊಂದು ನಾನು ಉಗ್ರಗಾಮಿ ಎಂದು ಹೇಳಬಹುದು" ಎಂದು ಅವರು ಕಣ್ಣೀರು ಹಾಕಿದ್ದಾರೆ.
ಸೋಮವಾರ ತಡರಾತ್ರಿ ಶ್ರೀನಗರದ ವಾಣಿಜ್ಯ ಸಂಕೀರ್ಣದೊಳಗೆ ನಡೆದ ಎನ್ಕೌಂಟರ್ನಲ್ಲಿ ವಾಣಿಜ್ಯ ಸಂಕೀರ್ಣದ ಮಾಲೀಕ ಸೇರಿದಂತೆ ಇಬ್ಬರು ಉದ್ಯಮಿಗಳು ಸಹ ಸಾವನ್ನಪ್ಪಿದ ಕಾರಣ ಎನ್ಕೌಂಟರ್ ಹೆಚ್ಚು ವಿವಾದಕ್ಕೆ ಕಾರಣವಾಗಿದೆ. ಉದ್ಯಮಿಗಳು ಭಯೋತ್ಪಾದಕ ಬೆಂಬಲಿಗರು ಎಂದು ಪೊಲೀಸರು ಹೇಳಿದ್ದಾರೆ. ಶ್ರೀನಗರದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಪುರುಷರ ಸಂಬಂಧಿಕರು ಅವರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ಪ್ರಮುಖ ಉದ್ಯಮಿ ಮೊಹಮ್ಮದ್ ಅಲ್ತಾಫ್ ಭಟ್ ಮತ್ತು ವೈದ್ಯರಾಗಿದ್ದ ಡಾ.ಮುದಾಸಿರ್ ಗುಲ್ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದರೆ. ನಂತರ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಉದ್ಯಮಿ ಹಾಗೂ ವೈದ್ಯ ಕ್ರಾಸ್ ಫೈರ್ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ಆದರೆ ಕುಟುಂಬಸ್ಥರು ಹೇಳುವುದೇ ಬೇರೆ. ಇಬ್ಬರೂ ಭದ್ರತಾ ಪಡೆಗಳು ಉದ್ದೇಶಪೂರ್ವಕವಾಗಿ ಅವರನ್ನು ಕೊಂದಿದ್ದಾರೆಂದು ಕುಟುಂಬಗಳು ಆರೋಪಿಸಿವೆ. ಅಂತಿಮ ಸಂಸ್ಕಾರಕ್ಕಾಗಿ ಮೃತದೇಹಗಳನ್ನು ಹಿಂತಿರುಗಿಸಬೇಕೆಂದು ಅವರು ಒತ್ತಾಯಿಸುತ್ತಿದ್ದರು. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಉಲ್ಲೇಖಿಸಿ ಪೊಲೀಸರು ಹಸ್ತಾಂತರಿಸಲು ನಿರಾಕರಿಸಿದ್ದಾರೆ. ಎಲ್ಲಾ ನಾಲ್ಕು ಶವಗಳನ್ನು ಶ್ರೀನಗರದಿಂದ 100 ಕಿಮೀ ದೂರದಲ್ಲಿರುವ ಹಂದ್ವಾರ ಪೊಲೀಸ್ ಜಿಲ್ಲೆಯ ಅಜ್ಞಾತ ಸ್ಥಳದಲ್ಲಿ ಹೂಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.