ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಬೇಕೆಂದರೆ ಪಾಕ್ನೊಂದಿಗೆ ಮಾತನಾಡಿ:ಮುಫ್ತಿ
ಶ್ರೀನಗರ,ಫೆಬ್ರವರಿ 21:ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಬೇಕೆಂದರೆ ಪಾಕಿಸ್ತಾನದ ಜತೆ ಮಾತಕತೆ ನಡೆಸಿ ಎಂದು ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.
ಕಾಶ್ಮೀರದಲ್ಲಿ ಇತ್ತೀಚಿಗೆ ಉಗ್ರರ ದಾಳಿ ನಡೆದ ನಂತರ, ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ತದೋಕುಳಿ ನಿಲ್ಲಿಸಲು, ಶಾಂತಿಯನ್ನು ಖಾತ್ರಿಪಡಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಬೇಕು ಎಂದಿದ್ದಾರೆ.
ಸೂಕ್ತ ಸಮಯದಲ್ಲಿ ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವ ಸ್ಥಾನಮಾನ; ಅಮಿತ್ ಶಾ
ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಫ್ತಿ, ಇಂತಹ ಚಟುವಟಿಕೆಯಿಂದ ಎಷ್ಟು ಪೊಲೀಸರು ಹುತಾತ್ಮರಾಗಿದ್ದಾರೆ ಎಂಬುದರ ಬಗ್ಗೆ ಭಾರತ ಸರ್ಕಾರ ಚರ್ಚಿಸಬೇಕಾಗಿದೆ. ಇದು ದೊಡ್ಡ ಸಮಸ್ಯೆಯಾಗಿದ್ದು, ಜಮ್ಮು-ಕಾಶ್ಮೀರ ಜನರ ಭೀತಿಯನ್ನು ಪರಿಹರಿಸಬೇಕಾಗಿದೆ ಎಂದು ಮುಫ್ತಿ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿನ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾದಿಯನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿರುವ ಮುಫ್ತಿ, ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರದ ಜನರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಜನ, ಪೊಲೀಸರು ಹಾಗೂ ಯೋಧರು ಪ್ರಾಣ ತ್ಯಾಗ ಮಾಡುತ್ತಿರುವಾಗ, ಇಲ್ಲಿನ ಹಿಂಸಾಚಾರಕ್ಕೆ ಪಾಕ್ ಪ್ರಚೋದನೆ ಕಾರಣ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ.
ಆಗಿದ್ದ ಮೇಲೆ ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ಪ್ರಕ್ರಿಯೆಯನ್ನು ಆರಂಭಿಸಲಿ. ರಕ್ತದೋಕುಳಿ ನಿಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಚಿಂತಿಸಬೇಕಾಗಿದ್ದು, ಮಾತುಕತೆ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಒತ್ತಾಯಿಸಿದ್ದಾರೆ.