ಉಗ್ರರ ಹಾವಳಿ ಇರುವ ಪ್ರದೇಶದಲ್ಲಿ 'ಸೈನಿಕ' ಧೋನಿ ಗಸ್ತು
ಶ್ರೀನಗರ, ಆಗಸ್ಟ್ 1: ಪ್ರಾದೇಶಿಕ ಸೇನಾಪಡೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಆಗಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು, ಉಗ್ರರ ಹಾವಳಿ ಹೆಚ್ಚಾಗಿರುವ ದಕ್ಷಿಣ ಕಾಶ್ಮೀರದ ಭಾಗದಲ್ಲಿ ಇತರೆ ಸಾಮಾನ್ಯ ಸೈನಿಕರಂತೆಯೇ ಗಸ್ತು, ಕಾವಲು ಕರ್ತವ್ಯಗಳನ್ನು ಬುಧವಾರ ನಿರ್ವಹಿಸಿದರು.
ಸೇನಾ ಪಡೆಗಳೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಆಗಸ್ಟ್ 15ರವರೆಗೂ 106 ಟಿಎ ಬಟಾಲಿಯನ್ನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್ನಿಂದ ನಿವೃತ್ತಿ ಬಳಿಕ ಬಿಜೆಪಿ ಸೇರುತ್ತಾರಾ ಎಂಎಸ್ ಧೋನಿ?
'ಲೆಫ್ಟಿನೆಂಟ್ ಕರ್ನಲ್ ಧೋನಿ ಅವರು ಬುಧವಾರ ಬೆಳಿಗ್ಗೆ ಇಲ್ಲಿಗೆ ಬಂದು, ತಮ್ಮ ತಂಡವನ್ನು ಸೇರಿಕೊಂಡರು' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಿಕ್ಟರ್ ಫೋರ್ಸ್ನ ಭಾಗವಾಗಿ ಉಗ್ರರ ಚಟುವಟಿಕೆ ತೀವ್ರವಾಗಿರುವ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಈ ತಂಡವನ್ನು ನಿಯೋಜಿಸಲಾಗಿದೆ. ಧೋನಿ ಅವರ ಮನವಿ ಮೇರೆಗೆ ಕಳೆದ ವಾರ ಸೇನಾ ಪ್ರಧಾನ ಕಚೇರಿಯು ಎರಡು ವಾರ ತಮ್ಮ ತಂಡದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು.
ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ನೀಡಲಾಗಿತ್ತು. ಐದು ಪ್ಯಾರಾಚೂಟ್ ತರಬೇತಿ ಜಿಗಿತಗಳನ್ನು ಪೂರೈಸಿದ ಬಳಿಕ ಅವರನ್ನು ಅರ್ಹ ಪ್ಯಾರಾಟ್ರೂಪರ್ ಎಂದು ಪರಿಗಣಿಸಲಾಗಿತ್ತು.
ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್ಗಳು
ಧೋನಿ ಅವರು ವೆಸ್ಟ್ ಇಂಡೀಟ್ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿಲ್ಲ. ಬದಲು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹಾಗೆಯೇ ಅವರ ನಡೆ ಬಗ್ಗೆ ಟೀಕೆಗಳೂ ವ್ಯಕ್ತವಾಗಿದೆ. ಕೆಲವರು ಅವರು ಪ್ರಚಾರಕ್ಕಾಗಿ ಸ್ಟಂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.