ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಪಡೆಯಲು ಜಮ್ಮುವಿನಲ್ಲಿ ಉಗ್ರರ ಅಡಗುತಾಣ
ಶ್ರೀನಗರ,ಫೆಬ್ರವರಿ 08: ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆಯಲು ಉಗ್ರರು ಜಮ್ಮುವಿನಲ್ಲಿ ಅಡುಗುತಾಣ ಸ್ಥಾಪಿಸಲು ಯೋಜನೆ ರೂಪಿಸಿದ್ದರು ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರು ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಾಕ್ ನಿಂದ ಸ್ವೀಕರಿಸಲು ಅದನ್ನು ಕಾಶ್ಮೀರಕ್ಕೆ ಕಳ್ಳಸಾಗಣೆ ಮಾಡಲು ಜಮ್ಮುವಿನಲ್ಲಿ ಅಡಗುತಾಣಗಳನ್ನು ಸ್ಥಾಪಿಸಲು ಪ್ಲ್ಯಾನ್ ಮಾಡಿದ್ದರು.
ಭಾರತಕ್ಕೆ ಗಡಿಪಾರು: ಮುಂಬೈ ದಾಳಿ ಆರೋಪಿ ರಾಣಾ ವಿರೋಧ
ಲಷ್ಕರ್ ಎ ಮುಸ್ತಫಾ ಭಯೋತ್ಪಾದಕರ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ನನ್ನು ನಿನ್ನೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ವಿಚಾರಣೆ ವೇಳೆ ಸ್ಫೋಟಕ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ ಎಂದರು.
ಗಡಿಯಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದು ಅದಕ್ಕಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಉಗ್ರರು ಮುಂದಾಗಿದ್ದು ಇದರ ಮಧ್ಯೆಯೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸವಾಲಿನ ಬಗ್ಗೆ ಎಚ್ಚರವಹಿಸಿದ್ದಾರೆ ಎಂದು ದಿಲ್ಬಾಗ್ ಸಿಂಗ್ ಹೇಳಿದರು.
ಶಾಂತಿ ಕದಡುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಜಮ್ಮು ಪೊಲೀಸರು ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.
ಈ ಹಿಂದೆ, ಧಾರ್ಮಿಕ ಸ್ಥಳಗಳನ್ನು ಪದೇ ಪದೇ ಗುರಿಯಾಗಿರಿಸಿ ದಾಳಿ ನಡೆಸಲಾಗುತ್ತಿತ್ತು. ಇತ್ತೀಚೆಗನಷ್ಟೆ ರಾಜೌರಿಯ ದೇವಾಲಯದ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು ಎಂದರು.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಗಳಾದ ಐಎಸ್ಐ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವವನ್ನು ನಡೆಸುತ್ತಿರುವ ಏಜೆನ್ಸಿಗಳಿಗೆ ಜಮ್ಮು ಪ್ರಮುಖ ಗುರಿಯಾಗಿದೆ.